Publish Date: Tue, 17 Dec 2024 (10:59 IST)
Updated Date: Tue, 17 Dec 2024 (11:08 IST)
ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ದರ್ಶನ್ ತೂಗುದೀಪ ಮತ್ತು ಪವಿತ್ರಾ ಗೌಡ ಸೇರಿದಂತೆ ದೊಡ್ಡ ಕುಳಗಳು ಈಗಾಗಲೇ ಜಾಮೀನು ಪಡೆದು ರಿಲೀಸ್ ಆಗಿದ್ದಾರೆ. ಆದರೆ ಇವರನ್ನು ನಂಬಿ ಹೋದ ಬಡಕುಟುಂಬದ ಅನುಕುಮಾರ್ ಮತ್ತು ಜಗದೀಶ್ ಗೆ ಜಾಮೀನು ಸಿಕ್ಕರೂ ಬಿಡುಗಡೆಯ ಭಾಗ್ಯವಿಲ್ಲ
ಒಟ್ಟು ಏಳು ಆರೋಪಿಗಳಿಗೆ ಹೈಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿತ್ತು. ಆದರೆ ನಿನ್ನೆಯಷ್ಟೇ ಶ್ಯೂರಿಟಿ ನೀಡಿ ಕಾನೂನು ಪ್ರಕ್ರಿಯೆಗಳು ಮುಗಿದಿತ್ತು. ಅದರಂತೆ ದರ್ಶನ್ ಈಗಾಗಲೇ ರಿಲೀಸ್ ಆಗಿದ್ದು ಪವಿತ್ರಾ ಗೌಡ ಇಂದು ರಿಲೀಸ್ ಆಗಿದ್ದಾರೆ. ಉಳಿದಂತೆ ನಾಗರಾಜ್, ಲಕ್ಷ್ಮಣ್, ಪ್ರದೋಷ್ ಇಂದು ಬಿಡುಗಡೆಯಾಗಲಿದ್ದಾರೆ. ಇವರೆಲ್ಲರಿಗೂ ಶ್ಯೂರಿಟಿ ಸಿಕ್ಕಿದೆ.
ಆದರೆ ಪ್ರಕರಣದಲ್ಲಿ ಜಾಮೀನು ಸಿಕ್ಕ ಇನ್ನಿಬ್ಬರು ಅರೋಪಿಗಳಾದ ಅನುಕುಮಾರ್ ಮತ್ತು ಜಗದೀಶ್ ಗೆ ಇನ್ನೂ ಯಾರೂ ಶ್ಯೂರಿಟಿ ನೀಡಲು ಮುಂದೆ ಬಂದಿಲ್ಲ. ಈ ಕಾರಣಕ್ಕೆ ಈ ಇಬ್ಬರೂ ಇನ್ನೂ ಜೈಲಿನಿಂದ ರಿಲೀಸ್ ಆಗಿಲ್ಲ. ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕರೆತರಲು ಅನುಕುಮಾರ್ ಸಹಾಯ ಮಾಡಿದ್ದ.
ಬಾಸ್ ಬಾಸ್ ಎಂದು ಹಿಂದೆ ಹೋಗಿ ಈ ಎಲ್ಲರೂ ಪ್ರಕರಣದಲ್ಲಿ ಸಿಲುಕಿಕೊಂಡಿದ್ದರು. ವಿಪರ್ಯಾಸವೆಂದರೆ ಈಗ ಇವರಿಗೆ ಶ್ಯೂರಿಟಿ ನೀಡುವವರೂ ಇಲ್ಲದೇ ಒದ್ದಾಡುತ್ತಿದ್ದಾರೆ. ಇದಿಗ ದರ್ಶನ್ ಸಹಾಯದ ನಿರೀಕ್ಷೆಯಲ್ಲಿ ಈ ಕುಟುಂಬಗಳಿವೆ.