Publish Date: Mon, 16 Dec 2024 (09:43 IST)
Updated Date: Mon, 16 Dec 2024 (09:47 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿದ್ದ ನಟ ದರ್ಶನ್ ಮತ್ತು ಪವಿತ್ರಾ ಗೌಡ ಸೇರಿದಂತೆ ಏಳು ಮಂದಿಗೆ ಜಾಮೀನು ಮಂಜೂರಾಗಿದೆ. ಇತ್ತ ದರ್ಶನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಬಹುದು ಎನ್ನಲಾಗಿದ್ದು ಅತ್ತ ಪವಿತ್ರಾ ಇಂದು ಜೈಲಿನಿಂದ ರಿಲೀಸ್ ಆಗಲಿದ್ದಾರೆ.
ಪವಿತ್ರಾ ಗೌಡಗೂ ಶುಕ್ರವಾರ ರೆಗ್ಯುಲರ್ ಜಾಮೀನು ಮಂಜೂರಾಗಿತ್ತು. ಆದರೆ ಕಾನೂನು ಪ್ರಕ್ರಿಯೆ ಮುಗಿಯದ ಕಾರಣ ಪವಿತ್ರಾ ಜೈಲಿನಲ್ಲೇ ಇದ್ದರು. ಇಂದು ಮಧ್ಯಾಹ್ನದ ವೇಳೆಗೆ ಅವರು ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಮೂಲಕ ಬರೋಬ್ಬರಿ ಆರು ತಿಂಗಳ ಬಳಿಕ ಹೊರಗಿನ ಪ್ರಪಂಚಕ್ಕೆ ಕಾಲಿಡಲಿದ್ದಾರೆ.
ಅತ್ತ ಪವಿತ್ರಾ ಜೈಲಿನಿಂದ ರಿಲೀಸ್ ಆಗುತ್ತಿದ್ದರೆ ಇತ್ತ ದರ್ಶನ್ ಕೂಡಾ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿಕೊಂಡರೂ ಅಚ್ಚರಿಯಿಲ್ಲ. ಯಾಕೆಂದರೆ ದರ್ಶನ್ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಇರಾದೆಯಲ್ಲಿಲ್ಲ. ಕೇವಲ ಫಿಸಿಯೋಥೆರಪಿ ಮೂಲಕವೇ ಚಿಕಿತ್ಸೆ ಪಡೆಯಲು ಉದ್ದೇಶಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಮುಂದಿನ ಚಿಕಿತ್ಸೆಯನ್ನು ಅವರು ಮನೆಯಲ್ಲಿಯೇ ಪಡೆದುಕೊಳ್ಳಬಹುದು. ಆದರೆ ಇದರ ಬಗ್ಗೆ ಪೊಲೀಸರು ಸುಪ್ರಿಂಕೋರ್ಟ್ ಮೇಲ್ಮನವಿ ಸಲ್ಲಿಸುವ ಭಯವೂ ಅವರಿಗಿದೆ. ಬೆನ್ನು ನೋವಿನ ಶಸ್ತ್ರಚಿಕಿತ್ಸೆಗೆಂದೇ ದರ್ಶನ್ ಮಧ್ಯಂತರ ಜಾಮೀನು ಪಡೆದು ಹೊರಬಂದಿದ್ದರು. ಆದರೆ ಈಗ ರೆಗ್ಯುಲರ್ ಜಾಮೀನು ಸಿಕ್ಕ ತಕ್ಷಣ ಶಸ್ತ್ರಚಿಕಿತ್ಸೆ ಮಾಡಿಸದೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರೆ ಪೊಲೀಸರು ಕೋರ್ಟ್ ಮೊರೆ ಹೋಗಬಹುದು. ಹೀಗಾಗಿ ಇಂದು ಅವರು ಯಾವ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂಬ ಕುತೂಹಲವಿದೆ.