Publish Date: Tue, 20 Sep 2022 (16:34 IST)
Updated Date: Tue, 20 Sep 2022 (17:38 IST)
ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಅದರದ್ದೇ ಆದ ಕಟ್ಟುಪಾಡುಗಳಿರುತ್ತವೆ. ಅವುಗಳಲ್ಲಿ 'ಅಂಗಿ-ಬನಿಯನ್ ತೆಗೆದು ಒಳಗೆ ಪ್ರವೇಶ ಮಾಡಿ' ಎಂಬ ನಿಯಮವೂ ಒಂದು. ರಾಜ್ಯದ ಕೆಲವು ದೇವಸ್ಥಾನಗಳಲ್ಲೂ ಈ ನಿಯಮ ಜಾರಿಯಲ್ಲಿದೆ. ಆದರೆ ಇದೀಗ ಈ ನಿಯಮಕ್ಕೆ ಆಕ್ಷೇಪ ವ್ಯಕ್ತಪಡಿಸಿ ಅರ್ಜಿಯೊಂದನ್ನು ಸಲ್ಲಿಸಲಾಗಿದೆ.
ದೇವಸ್ಥಾನಗಳಲ್ಲಿ ಅಂಗಿ-ಬನಿಯನ್ ತೆಗೆದು ಪ್ರವೇಶ ಮಾಡಬೇಕು ಎಂಬ ನಿಯಮಕ್ಕೆ ಆಕ್ಷೇಪ ವ್ಯಕ್ತಪಡಿಸಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಗೆ ಮಂಗಳೂರು ಮೂಲದ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ (ಎನ್ಇಸಿಎಫ್) ಅರ್ಜಿ ಸಲ್ಲಿಸಿದೆ.
ಇತ್ತೀಚೆಗೆ ಎನ್ಇಸಿಎಫ್ ಸದಸ್ಯರು ಕೊಲ್ಲೂರು ಮತ್ತು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಗಳಿಗೆ ಭೇಟಿ ನೀಡಿದಾಗ ಅಲ್ಲಿ ಪುರುಷರು ಅಂಗಿ ಮತ್ತು ಬನಿಯನ್ ತೆಗೆದು ಒಳಗೆ ಪ್ರವೇಶ ಮಾಡಬೇಕು ಎಂಬ ನಿಯಮ ಇರುವುದು ಕಂಡುಬಂದಿತ್ತು. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಿದಾಗ ಹಿಂದೂ ಧರ್ಮಗ್ರಂಥಗಳಲ್ಲಿ ಇಂಥ ನಿಯಮಗಳ ಉಲ್ಲೇಖ ಇರುವುದು ಕಂಡುಬಂದಿಲ್ಲ. ಮಾತ್ರವಲ್ಲ, ಈ ಕುರಿತು ಯಾವುದೇ ಸರ್ಕಾರಿ ಆದೇಶ ಕೂಡ ಇರುವುದಿಲ್ಲ. ಅದಾಗ್ಯೂ ಯಾತ್ರಿಗಳಿಗೆ ಮುಜುಗರ ಆಗುವಂಥ ಈ ನಿಯಮ ವರ್ಷಗಳಿಂದ ಜಾರಿಯಲ್ಲಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಹೀಗೆ ಅಂಗಿ-ಬನಿಯನ್ ತೆಗೆದು ಪ್ರವೇಶಿಸುವವರಲ್ಲಿ ಚರ್ಮದ ಕಾಯಿಲೆಗಳು ಇದ್ದರೆ ಅದು ಇನ್ನೊಬ್ಬರಿಗೆ ಹರಡಲಿಕ್ಕೂ ಕಾರಣವಾಗಬಹುದು. ಅಲ್ಲದೆ ವಿಕಲಚೇತನರಿಗೆ ದೇಹವನ್ನು ಅನಿವಾರ್ಯವಾಗಿ ತೆರೆದು ತೋರಿಸಬೇಕಾದ ಮುಜುಗರ ಉಂಟಾಗಬಹುದು, ಇದು ಅಮಾನನೀಯ. ಅಷ್ಟೇ ಅಲ್ಲ, ಭಾರತದ ಸಂವಿಧಾನದಲ್ಲಿನ ಮೂಲಭೂತ ಹಕ್ಕುಗಳ ಉಲ್ಲಂಘನೆ ಕೂಡ. ಹೀಗಾಗಿ ದೇವಸ್ಥಾನಗಳಲ್ಲಿ ಹಾಕಿರುವ 'ಕಡ್ಡಾಯವಾಗಿ ಅಂಗಿ-ಬನಿಯನ್ ತೆಗೆದು ಪ್ರವೇಶ ಮಾಡಬೇಕು' ಎಂಬ ಫಲಕಗಳನ್ನು ತೆಗೆಸಬೇಕು. ಅಲ್ಲದೆ ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸುವಂತೆ ಮಾಡಲು ಕೆಲವರನ್ನು ಬೆತ್ತ ಹಿಡಿದು ನಿಲ್ಲಿಸುವುದನ್ನೂ ಕೂಡ ನಿಲ್ಲಿಸಬೇಕು ಎಂದು ಎನ್ಇಸಿಎಫ್ ಪ್ರತ ಮುಖೇನ ತಿಳಿಸಿದ್ದಲ್ಲದೆ, ತಮ್ಮ ಮನವಿಗೆ ಸಂಬಂಧಿಸಿದಂತೆ 15 ದಿನದ ಒಳಗೆ ಪ್ರತಿಕ್ರಿಯಿಸುವಂತೆಯೂ ಕೋರಿದೆ.