Publish Date: Tue, 20 Sep 2022 (16:09 IST)
Updated Date: Tue, 20 Sep 2022 (17:14 IST)
ಮಗಳು ಹುಟ್ಟಿ ಒಂಬತ್ತು ವರ್ಷದವರೆಗೂ ಈ ಪೋಷಕರು ತಮ್ಮ ಮಗಳಿಗೆ ಹೆಸರೇ ಇಟ್ಟಿಲ್ಲವಂತೆ… ಅರೆ ಇದೇನಿದು ಮಗುವಿಗೆ ಸಾಮಾನ್ಯವಾಗಿ ಒಂದು ವರ್ಷದ ವರೆಗೆ ಕೆಲವರು ನಾನಾ ಕಾರಣಗಳಿಂದ ನಾಮಕರಣ ಮಾಡದೆ ಮುಂದೂಡುವುದು ಸಾಮಾನ್ಯ, ಆದರೆ ಇಲ್ಲೊಂದು ಕುಟುಂಬ ಒಂದಲ್ಲ ಎರಡಲ್ಲ ಬರೋಬ್ಬರಿ ಒಂಬತ್ತು ವರ್ಷಗಳ ಕಾಲ ತಮ್ಮ ಮಗಳಿಗೆ ಹೆಸರೇ ಇಡಲಿಲ್ಲವಂತೆ, ಅದಕ್ಕೊಂದು ಕಾರಣವೂ ಇದೆ.
2013ರಲ್ಲಿ ತೆಲಂಗಾಣದ ಮಂಡಲದ ನಂದಿಗಾಮ ಗ್ರಾಮದ ಸುರೇಶ್ ಮತ್ತು ಅನಿತಾ ದಂಪತಿಗೆ ಹೆಣ್ಣು ಮಗು ಜನಿಸಿದೆ ಈ ವೇಳೆ ದಂಪತಿಗಳು ತೆಲಂಗಾಣದ ಜನಪ್ರಿಯ ನಾಯಕ ಕೆ.ಚಂದ್ರಶೇಖರ್ ರಾವ್ (ಕೆಸಿಆರ್) ಅವರ ಕೈಯಿಂದಲೇ ಮಗುವಿಗೆ ನಾಮಕರಣ ಮಾಡಬೇಕೆಂಬುದು ಬಯಸಿದ್ದರು, ನಾಮಕರಣಕ್ಕಾಗಿ ಮಗುವಿನ ಪೋಷಕರು ಒಂಬತ್ತು ವರ್ಷ ಕಾಯಬೇಕಾಯಿತು ರವಿವಾರ (ಸೆಪ್ಟೆಂಬರ್ 18) ರಂದು ಆ ಸಂಭ್ರಮದ ಘಳಿಗೆ ಬಂದೊದಗಿದೆ.
ತೆಲಂಗಾಣದ ವಿಧಾನಪರಿಷತ್ ಸದಸ್ಯ ಹಾಗೂ ಮಾಜಿ ಅಸೆಂಬ್ಲಿ ಸ್ಪೀಕರ್ ಮಧುಸೂಧನ ಚಾರಿ ಅವರಿಗೆ ಈ ದಂಪತಿಗಳು ತಮ್ಮ ಮಗುವಿಗೆ ಹೆಸರಿಡದ ವಿಚಾರ ಹೇಗೋ ತಿಳಿಯಿತು ಅಲ್ಲದೆ ಅವರು ತೆಲಂಗಾಣದ ಮುಖ್ಯಮಂತ್ರಿ ಕೈಯಿಂದಲೇ ಮಗುವಿಗೆ ಹೆಸರಿಡಬೇಕು ಅನ್ನೋ ವಿಚಾರನು ತಿಳಿದುಕೊಂಡ ಅವರು ದಂಪತಿ ಮತ್ತು ಮಗುವನ್ನು ತೆಲಂಗಾಣ ಮುಖ್ಯಮಂತ್ರಿಯ ಅಧಿಕೃತ ನಿವಾಸ ಪ್ರಗತಿ ಭವನಕ್ಕೆ ಭಾನುವಾರ ಬರಲು ಹೇಳಿದ್ದರು. ಅದರಂತೆ ಮುಖ್ಯಮಂತ್ರಿಗಳ ನಿವಾಸಕ್ಕೆ ದಂಪತಿಗಳು ಮಗುವಿನ ಸಮೇತ ಆಗಮಿಸಿದ್ದಾರೆ, ನಾಮಕರಣ ಮಾಡದ ವಿಚಾರ ತಿಳಿದ ತೆಲಂಗಾಣ ಸಿಎಂ ಕೆಸಿಆರ್ ಸುರೇಶ್ ಮತ್ತು ಅನಿತಾ ದಂಪತಿಗಳನ್ನು ಅಭಿನಂದಿಸಿ ಮಗಳಿಗೆ ಮಹತಿ ಎಂದು ನಾಮಕರಣ ಮಾಡಿದ್ದಾರೆ.
ಇದರೊಂದಿಗೆ ದಂಪತಿಗಳ ಆಸೆಯೊಂದು ಒಂಬತ್ತು ವರ್ಷಗಳ ಬಳಿಕ ನೆರವೇರಿದಂತಾಗಿದೆ.