Publish Date: Mon, 09 Jul 2018 (16:04 IST)
Updated Date: Mon, 09 Jul 2018 (16:13 IST)
ಶಿವಯೋಗ ಮಂದಿರ ಜಂಗಮರಿಗೆ ಮಾತ್ರ ಸೀಮಿತವಾಗಿದೆ. ಶಿವಯೋಗ ಮಂದಿರವನ್ನು ಕೆಲವೇ ಜಂಗಮರು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ ಎಂದು ಸ್ವಾಮೀಜಿಯೊಬ್ಬರು ವಿವಾದಿತ ಹೇಳಿಕೆ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸಿದ್ದಗಿರಿ ಕನೇರಿ ಮಠದ ಕಾಡಸಿದ್ಧೇಶ್ವರ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ಶಿವಯೋಗ ಮಂದಿರ ಜಂಗಮರಿಗೆ ಮಾತ್ರ ಸೀಮಿತವಾಗಿದೆ. ಶಿವಯೋಗ ಮಂದಿರವನ್ನು ಕೆಲವೇ ಜಂಗಮರು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಒಂದು ಉದ್ಯೋಗ ನೀಡುವ ಕಚೇರಿಯಂತೆ ಮಾಡಿದ್ದಾರೆ. ಮಠಗಳಲ್ಲಿ ಸನ್ಯಾಸಿಗಳ ಸಂಬಂಧಿಕರೇ ತುಂಬಿಕೊಂಡಿದ್ದಾರೆ. ವೀರಶೈವ ಮತ್ತು ಲಿಂಗಾಯತ ಮಹಾಸಭಾ ಈ ಕುರಿತು ಚಿಂತನೆ ನಡೆಸಲಿ. ಮಠದಲ್ಲಿರುವ ಸಂಬಂಧಿಗಳ ಪಾರುಪತ್ಯ ಕುರಿತು ತನಿಖೆ ನಡೆಸಲಿ.
ನಮ್ಮದು ಹಿಂದೂ ಧರ್ಮದ ಲಿಂಗಾಯತ ಪಂಥ. ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಅವಶ್ಯಕತೆಯಿಲ್ಲ.
ಸ್ವಾಮಿಗಳಾದವರು ಮಾರ್ಗದರ್ಶಕರಾಗಬೇಕು, ರಾಜಕೀಯ ಮುಖಂಡರಾಗಬಾರದು. ಯಾವುದೇ ಒಂದು ರಾಜಕೀಯ ಪಕ್ಷ, ವ್ಯಕ್ತಿಯನ್ನು ಬೆಂಬಲಿಸಬಾರದು. ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಮಾಡಿದವರು ಈಗ ಸಾಕಪ್ಪ ಸಾಕು ಎನ್ನುತ್ತಿದ್ದಾರೆ.
ಸಮಾಜಕ್ಕೆ ಒಬ್ಬ ಒಳ್ಳೆಯ ಸನ್ಯಾಸಿಯನ್ನು ಕೊಡಬೇಕು ಎನ್ನುವುದು ನಮ್ಮ ನಿಲುವು. ಹೀಗಾಗಿ 300 ಜನ ಸ್ವಾಮೀಜಿಗಳು ಸೇರಿ ಸಮಾನ ಮನಸ್ಕ ಸನ್ಯಾಸಿಗಳ ವೇದಿಕೆ ಮಾಡಿಕೊಂಡಿದ್ದೇವೆ. ಜಾತಿ ಬೇಧಭಾವ ಇಲ್ಲದೆ ಸನ್ಯಾಸಿಗಳನ್ನು ಸಿದ್ಧಪಡಿಸುತ್ತೇವೆ.
ಬಸವತತ್ವ, ಅದ್ವೈತ ಸಿದ್ಧಾಂತ, ಪೌರೋಹಿತ್ಯ, ಕೀರ್ತನೆ, ಕೃಷಿ ಬಗ್ಗೆ ತರಬೇತಿ ನೀಡುತ್ತೇವೆ ಎಂದಿದ್ದಾರೆ.