Publish Date: Thu, 29 Nov 2018 (11:15 IST)
Updated Date: Thu, 29 Nov 2018 (11:17 IST)
ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಆದವರಿಗೆ ತಾಳ್ಮೆ ಇರಬೇಕು, ಎಲ್ಲರಿಗೂ ಉತ್ತರಿಸುವ ಸೌಜನ್ಯ ಇರಬೇಕು. ಆದರೆ ಈ ಮುಖ್ಯಮಂತ್ರಿಗೆ ಅದು ಯಾವುದೂ ಇಲ್ಲ. ಹೀಗಾಗಿ ಇವರು ಹೆಚ್ಚು ದಿನ ಅಧಿಕಾರದಲ್ಲಿ ಇರಲ್ಲ ಎಂದು ಮಾಜಿ ಡಿಸಿಎಂ, ಬಿಜೆಪಿ ಶಾಸಕ ಆರ್ ಅಶೋಕ್ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್ ‘ರಾಜಕಾರಣ ನಿಂತ ನೀರಲ್ಲ. ಇಲ್ಲಿ ಏನು ಬೇಕಾದರೂ ಆಗಬಹುದು. ಸಿದ್ದರಾಮಯ್ಯನವರೇ ದೇವೇಗೌಡರ ಜತೆ ಹೋಗುತ್ತಾರೆಂದರೆ ಇಲ್ಲಿ ಏನು ಬೇಕಾದರೂ ಆಗಬಹುದು. ಸಿದ್ದರಾಮಯ್ಯ ಬಿಜೆಪಿ ಸೇರ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಈ ಸರ್ಕಾರವಂತೂ ಹೆಚ್ಚು ದಿನ ಉಳಿಯಲ್ಲ. ಜನತೆ, ಭಗವಂತ ಇದರ ಪತನಕ್ಕೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ’ ಎಂದು ಅಶೋಕ್ ಹೇಳಿದ್ದಾರೆ.
ಇನ್ನು, ಸಿಎಂ ಕುಮಾರಸ್ವಾಮಿ ಪದೇ ಪದೇ ತಾಳ್ಮೆ ಕಳೆದುಕೊಳ್ಳುತ್ತಿರುವವರ ಬಗ್ಗೆ ಮಾತನಾಡಿದ ಅಶೋಕ್ ‘ನಿಮಗೇ ಗೊತ್ತಿದೆ, ಈ ಮುಖ್ಯಮಂತ್ರಿಗಳು ಪದೇ ಪದೇ ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ. ಪ್ರಶ್ನೆ ಕೇಳುವ ಮಾಧ್ಯಮಗಳ ಮೇಲೆ ರೇಗುತ್ತಾರೆ, ವಿಷ್ಣುವರ್ಧನ್ ಸ್ಮಾರಕದ ಬಗ್ಗೆ ಮಾತನಾಡಿದ್ರೆ ತಾಳ್ಮೆ ಕಳೆದುಕೊಳ್ಳುತ್ತಾರೆ. ಯಾರು ಏನೇ ಹೇಳಿದರೂ ರೇಗಾಡುತ್ತಾರೆ. ಈ ರೀತಿ ತಾಳ್ಮೆ ಕಳೆದುಕೊಳ್ಳುವುದು ಮುಖ್ಯಮಂತ್ರಿಗೆ ಶೋಭೆಯಲ್ಲ’ ಎಂದು ಲೇವಡಿ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.