ಬೆಂಗಳೂರು: ದುಡ್ಡು ಹೊಡೆಯುವ ಸುರಂಗ ರಸ್ತೆ ಬೇಡ; ಸರಕಾರ ಎಡವುವುದು ಬೇಡ. ಬದಲಾಗಿ ಜನೋಪಯುಕ್ತವೆನಿಸಿದ ಮೆಟ್ರೋ ಯೋಜನೆಯನ್ನು ವಿಸ್ತರಿಸಿ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಅವರು ಆಗ್ರಹಿಸಿದರು.
ಕಾಂಗ್ರೆಸ್ ಸರ್ಕಾರ ಪ್ರಕೃತಿಯನ್ನು ನಾಶಪಡಿಸಿ, ಕೆರೆಗಳನ್ನು ಹಾಳುಮಾಡಿ, ಅವೈಜ್ಞಾನಿಕ ಮೇಲುಸೇತುವೆಗಳನ್ನು ನಿರ್ಮಿಸಿ, ಸ್ಯಾಂಕಿ ಕೆರೆಯ ನಾಶಕ್ಕೆ ಮುಂದಾಗಿದ್ದು, ಈ ಕೆರೆಯ ಸಂರಕ್ಷಣೆಗಾಗಿ ಸಹಿ ಸಂಗ್ರಹ, ವೀಕ್ಷಣೆ ಹಾಗೂ ಸರ್ಕಾರದ ಅಧಿಕಾರಿಗಳೊಂದಿಗೆ ಪರಿಶೀಲನೆಯನ್ನು ಇಂದು ಮಲ್ಲೇಶ್ವರದ 18ನೇ ಕ್ರಾಸ್ ಬಳಿ ಇರುವ ಸ್ಯಾಂಕಿ ಕೆರೆಯ ಮುಖ್ಯದ್ವಾರದ ಬಳಿ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಿಹಾರದ ಚುನಾವಣೆಗೆ ನೀವು 400 ಕೋಟಿ ಕಳುಹಿಸುತ್ತೀರಿ. ಅದು ಗೋವಿಂದ ಆಗಿದೆ ಎಂದು ಟೀಕಿಸಿದರು.
ಬೆಂಗಳೂರಿನಲ್ಲಿ ಮೆಟ್ರೋ ಯೋಜನೆ ಸಾಫಲ್ಯಗೊಂಡಿದೆ. ಸುಮಾರು 60 ಲಕ್ಷಕ್ಕೂ ಹೆಚ್ಚು ಜನರು ಇದರಲ್ಲಿ ಪ್ರಯಾಣ ಮಾಡುತ್ತಾರೆ. ಸುರಂಗ ರಸ್ತೆಯಿಂದ ಪರಿಸರವೂ ಹಾಳಾಗುತ್ತದೆ. ಸುರಂಗ ಮಾಡಿದ ಕಲ್ಲು ಮಣ್ಣನ್ನು ಎಲ್ಲಿ ಹಾಕುತ್ತೀರಿ ಎಂದು ಕೇಳಿದರು.
ಬೆಂಗಳೂರಿನ ಜನರು ತೆರಿಗೆ ಭಾರದೊಂದಿಗೆ ಸಾವು ನೋವಿನ ಜೊತೆ ಬದುಕುತ್ತಿದ್ದಾರೆ. ಚಿತ್ರಹಿಂಸೆ ಅನುಭವಿಸುತ್ತಿದ್ದಾರೆ. ಕಸ, ನೀರು ಸೇರಿ ಎಲ್ಲ ತೆರಿಗೆಗಳನ್ನು ಹೇರಿದ್ದಾರೆ ಎಂದು ಆಕ್ಷೇಪಿಸಿದರು. ಸಾವಿರಾರು ಕೋಟಿ ವೆಚ್ಚದಿಂದ ಬೆಂಗಳೂರಿನ ಸಂಚಾರ ಸುಗಮ ಆಗಲಿದೆಯೇ ಎಂದು ಪ್ರಶ್ನಿಸಿದರು.
ಸಮರ್ಪಕ ಯೋಜನೆ ಮಾಡಿಲ್ಲ; ಸುಮ್ಮನೆ ಟೆಂಡರ್ ಕರೆದು ದುಡ್ಡು ಹೊಡೆಯುವ ಸ್ಕೀಂ ಇದಾಗಿದೆ ಎಂದರು. ಬಿಜೆಪಿ ಅಭಿವೃದ್ಧಿಯ ವಿರೋಧಿಯಲ್ಲ ಎಂದು ಅವರು ಸ್ಪಷ್ಟಪಡಿಸಿದರು.