Publish Date: Wed, 03 Jul 2024 (10:19 IST)
Updated Date: Wed, 03 Jul 2024 (10:21 IST)
ಬೆಂಗಳೂರು: ಪುನೀತ್ ರಾಜ್ ಕುಮಾರ್ ತೀರಿಕೊಂಡಾಗ ಅವರ ಗೌರವಾರ್ಥ ಸರ್ಕಾರ ಜಾರಿಗೆ ತಂದ ಹೃದಯ ಜ್ಯೋತಿ ಯೋಜನೆ ಈಗ 10 ಜನರ ಪ್ರಾಣ ಉಳಿಸಿದೆ. ದೈಹಿಕವಾಗಿ ನಮ್ಮೊಂದಿಗೆ ಇಲ್ಲದೇ ಇದ್ದರೂ ಅಪ್ಪು ಹೆಸರಿನಲ್ಲಿ ಕೆಲವರ ಪ್ರಾಣ ಉಳಿಯುತ್ತಿದೆ ಎಂಬುದೇ ಅಭಿಮಾನಿಗಳಿಗೆ ಹೆಮ್ಮೆ.
ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ ಯೋಜನೆಯಡಿ ಮೊದಲನೇ ಹಂತದಲ್ಲಿ ಹಬ್ ಸ್ಟೋಕ್ ಮಾದರಿಯನ್ನು ಜಯದೇವ ಹೃದ್ರೋಗ ಸಂಸ್ಥೆಯ ಸಹಯೋಗದೊಂದಿಗೆ 45 ಆಸ್ಪತ್ರೆಗಳಲ್ಲಿ ಜಾರಿಗೊಳಿಸಲಾಗಿತ್ತು. ಕಳೆದ ಮಾರ್ಚ್ ನಿಂದ ಈ ಯೋಜನೆಯಡಿಯಲ್ಲಿ ಟೆನೆಕ್ಟೆಪ್ಲೇಸ್ ಇಂಜೆಕ್ಷನ್ ಲಭ್ಯವಾಗಿದೆ. ಈ ಚುಚ್ಚು ಮದ್ದನ್ನು ಇದುವರೆಗೆ 10 ಜನರಿಗೆ ನೀಡಿ ಜೀವ ಉಳಿಸಲಾಗಿದೆ.
ಎದೆನೋವು ಕಾಣಿಸಿಕೊಂಡವರು ತಕ್ಷಣವೇ ಸ್ಟೋಕ್ ಕೇಂದ್ರಗಳಿಗೆ ಭೇಟಿ ನೀಡಿದಾಗ 6 ನಿಮಿಷದೊಳಗೆ ಅವರ ಸ್ಥಿತಿ ಗತಿಯನ್ನು ಎಐ ತಂತ್ರಜ್ಞಾನದಿಂದ ಪತ್ತೆ ಹಚ್ಚಲಾಗುತ್ತದೆ. ಆ ಸಂದರ್ಭದಲ್ಲಿ ಹೃದಯಾಘಾತವಾಗುವ ಸೂಚನೆ ಇಸಿಜಿ ಪರೀಕ್ಷೆಯಲ್ಲಿ ಕಂಡುಬಂದರೆ ತಕ್ಷಣವೇ ಚಿಕಿತ್ಸೆ ಕೊಡಲಾಗುತ್ತದೆ.
ಈ ಯೋಜನೆಗೆ ಪುನೀತ್ ರಾಜ್ ಕುಮಾರ್ ಹೆಸರು ನೀಡಲಾಗಿತ್ತು. ಈ ಯೋಜನೆಯ ಮೊದಲ ಹಂತದಲ್ಲಿ ಈಗ 10 ಜನರ ಪ್ರಾಣ ಉಳಿಸಲಾಗಿದೆ. ಈ ಒಂದು ಚುಚ್ಚು ಮದ್ದಿನ ಬೆಲೆ 25 ಸಾವಿರ ರೂ. ಹೃದಯಾಘಾತವಾದ ತಕ್ಷಣ ಆಸ್ಪತ್ರೆಗೆ ದಾಖಲಾಗಿ ಗೋಲ್ಡನ್ ಅವರ್ ನಲ್ಲಿ ಈ ಚುಚ್ಚು ಮದ್ದು ನೀಡಿದರೆ ಜೀವ ಉಳಿಸಬಹುದಾಗಿದೆ.