Publish Date: Sat, 23 Apr 2022 (16:22 IST)
Updated Date: Sat, 23 Apr 2022 (16:24 IST)
ಪಿಎಸ್ ಐ ನೇಮಕಾತಿಯ ಯಾವುದೇ ಬ್ಯಾಚ್ ನಲ್ಲಿ ಅಕ್ರಮವಾಗಿದ್ದರೂ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೆಂಗಳೂರಿನಲ್ಲಿ ಶನವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಪ್ರಿಯಾಂಕ ಖರ್ಗೆ ಬಿಡುಗಡೆ ಮಾಡಿರುವ ಆಡಿಯೋ ನಾನು ಕೇಳಿಲ್ಲ.ಯಾವ ಮೆಟೀರಿಯಲ್ ಇದ್ದರೂ ತನಿಖೆಯಾಗುತ್ತದೆ. ಇಬ್ಬರ ನಡುವೆ ಮಾತುಕತೆಯಾಗಿದೆ. ಅವರಿಬ್ಬರು ಯಾರು, ಅವರ ಅರ್ಹತೆ ಏನು ಎನ್ನುವುದು ತನಿಖೆಯಲ್ಲಿ ತಿಳಿಯುತ್ತದೆ. ಆಡಿಯೋವನ್ನು ಸಹ ತನಿಖೆಗೆ ಒಳಪಡಿಸಿ ಯಾರೇ ತಪ್ಪಿತಸ್ಥರಿದ್ದರೂ, ಯಾವುದೇ ಬ್ಯಾಚ್ ಆಗಿದ್ದರೂ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಕಳೆದ 15 ದಿನಗಳ ಹಿಂದೆ ಶಾಲೆಗಳಿಗೆ ಬಂದಿದ್ದ ಬೆದರಿಕೆ ಇ- ಮೇಲ್ ಸಿರಿಯಾ ಹಾಗೂ ಪಾಕಿಸ್ತಾನದಿಂದ ಬಂದಿದೆ ಎಂಬ ಮಾಹಿತಿ ಬಂದಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ಈ ಬಗ್ಗೆ ಗೊತ್ತಿಲ್ಲ. ಪೊಲೀಸ್ ಆಯುಕ್ತರೊಂದಿಗೆ ಮಾತನಾಡುವುದಾಗಿ ತಿಳಿಸಿದರು.
ಇವೆಲ್ಲಾ ಆಗಾಗ್ಗೆ ಶಾಂತಿ ಕದಡಲು ಈ ರೀತಿಯ ಪ್ರಯತ್ನಗಳಾಗುತ್ತವೆ. ಕಳೆದ ವರ್ಷವೂ ಆಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಇ- ಮೇಲ್ ಮೂಲವನ್ನು ಪತ್ತೆ ಹಚ್ಚಲಾಗುವುದು. ಯಾವ ದೇಶದಿಂದ ಬಂದಿದೆ ಎಂದು ಗೊತ್ತಾಗುತ್ತದೆ. ಕೆಲವು ಸಂದರ್ಭದಲ್ಲಿ ಆ ದೇಶದ ಅಧಿಕಾರಿಗಳಿಗೆ ತಿಳಿಸಿ, ಕೆಲವರನ್ನು ಬಂಧಿಸಲಾಗಿದೆ. ಕ್ರಮ ತೆಗೆದುಕೊಳ್ಳಲಾಗುವುದು ಎಂದರು.