Publish Date: Tue, 07 Apr 2026 (20:20 IST)
Updated Date: Tue, 07 Apr 2026 (20:22 IST)
ಬೆಂಗಳೂರು: ಅಸ್ಸಾಂ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಮತ್ತು ಆರ್ಎಸ್ಎಸ್ ಕುರಿತು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಚೋದನಾಕಾರಿ ಭಾಷಣ ಮಾಡಿದ್ದು, ಅವರನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿ ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ ಅವರಿಗೆ ಇಂದು ಬಿಜೆಪಿ ನಿಯೋಗದಿಂದ ಮನವಿ ಸಲ್ಲಿಸಲಾಗಿದೆ.
ನಿಯೋಗದಲ್ಲಿ ಶಾಸಕರಾದ ಎಸ್. ಮುನಿರಾಜು, ಸಿ. ಕೆ. ರಾಮಮೂರ್ತಿ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷರಾದ ಎಸ್. ಹರೀಶ್, ರಾಜ್ಯ ವಕ್ತಾರರಾದ ಪ್ರಕಾಶ್ ಎಸ್. ಮತ್ತು ಪ್ರಮುಖರು ಇದ್ದರು.
ಈ ವೇಳೆ ಮಾತನಾಡಿದ ಶಾಸಕ ಎಸ್.ಮುನಿರಾಜು ಅವರು, ಬಿಜೆಪಿ ಮತ್ತು ಆರೆಸ್ಸೆಸ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ವಿರುದ್ಧ ಮೊಕದ್ದಮೆ ದಾಖಲಿಸಿ ಅವರನ್ನು ಬಂಧಿಸಲು ಒತ್ತಾಯಿಸಲಾಗಿದೆ.
ಅಸ್ಸಾಂನಲ್ಲಿ ನಿನ್ನೆ ಚುನಾವಣಾ ಭಾಷಣ ಮಾಡುವಾಗ ಕಾಂಗ್ರೆಸ್ ಪಕ್ಷದ ರಾಷ್ಟೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನಮಾಜ್ ಮಾಡುವಾಗ ವಿಷಸರ್ಪ ಬಂದರೆ ನೀವು ನಮಾಜನ್ನು ನಿಲ್ಲಿಸಿ ಅದನ್ನು ಕೊಲ್ಲಿ; ನಮಾಜ್ ಮಾಡುವಾಗ ಬಿಜೆಪಿ, ಆರೆಸ್ಸೆಸ್ನವರು ಬಂದರೆ ನಮಾಜನ್ನು ನಿಲ್ಲಿಸಿ ಅವರನ್ನು ಕೊಲ್ಲಿ; ಇದು ಕುರಾನ್ನಲ್ಲಿ ಉಲ್ಲೇಖ ಆಗಿದೆ ಎಂದಿದ್ದಾರೆ. ಇದು ಬೆಂಕಿ ಹಚ್ಚುವ ಕೆಲಸ ಎಂದು ಟೀಕಿಸಿದರು.
ಕೋಮುಗಲಭೆ ಹರಡುವ ಸಂದರ್ಭಗಳು ಬರಬಹುದು. ದೇಶದ್ರೋಹಿಗಳು, ಮೂಲಭೂತವಾದಿಗಳಿಗೆ ಬೆಂಬಲ ಸೂಚಿಸುವ ಮಾತುಗಳಿವು. ಇದರ ವಿರುದ್ಧ ಹೋರಾಟ ಮಾಡಲಾಗುತ್ತಿದೆ. ನಾನು, ಜಿಲ್ಲಾಧ್ಯಕ್ಷ ಹರೀಶ್, ಶಾಸಕ ಮತ್ತು ಜಿಲ್ಲಾಧ್ಯಕ್ಷ ಸಿ.ಕೆ.ರಾಮಮೂರ್ತಿ, ಪ್ರಮುಖರಾದ ಪ್ರಕಾಶ್ ಮತ್ತಿತರರು ಡಿಜಿ-ಐಜಿಪಿ ಅವರನ್ನು ಭೇಟಿ ಮಾಡಿ ದೂರು ನೀಡಿದ್ದೇವೆ ಎಂದರು.
ಇದನ್ನು ಕೂಲಂಕಷವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಡಿಜಿ-ಐಜಿಪಿ ಹೇಳಿದ್ದಾರೆ ಎಂದು ತಿಳಿಸಿದರು. ಇದು ದೇಶದ್ರೋಹಿ ಮಾತು. ಇದನ್ನಾಡಿದ ಖರ್ಗೆಯವರನ್ನು ಬಂಧಿಸಲು ಒತ್ತಾಯಿಸಿದರು.
Sampriya
Publish Date: Tue, 07 Apr 2026 (20:20 IST)
Updated Date: Tue, 07 Apr 2026 (20:22 IST)