Publish Date: Wed, 22 Sep 2021 (21:26 IST)
Updated Date: Wed, 22 Sep 2021 (21:29 IST)
ಬೆಂಗಳೂರು: ಖಾಸಗಿ ಶಾಲೆಗಳ ದುಬಾರಿ ಶುಲ್ಕವನ್ನು ಕಡಿತಗೊಳಿಸಿ ಬಡ ಹಾಗೂ ಮಧ್ಯಮವರ್ಗದ ಪೋಷಕರಿಗೆ ನೆರವಾಗಲು ರಾಜ್ಯ ಸರ್ಕಾರ ನಿರಾಸಕ್ತಿ ತೋರುತ್ತಿರುವುದನ್ನು ಖಂಡಿಸಿ ಆಮ್ ಆದ್ಮಿ ಪಾರ್ಟಿಯು ಬುಧವಾರ ಪ್ರತಿಭಟನೆ ನಡೆಸಿತು.
ಬೆಂಗಳೂರಿನ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಕೋವಿಡ್ ಹಾಗೂ ಲಾಕ್ಡೌನ್ನಿಂದಾಗಿ ಹಲವು ತಿಂಗಳು ದುಡಿಮೆಯಿಲ್ಲದೇ ಅನೇಕ ಪೋಷಕರು ತೀರಾ ಕಷ್ಟದಿಂದ ಜೀವನ ಸಾಗಿಸಿದ್ದಾರೆ. ಅನೇಕ ಕುಟುಂಬಗಳ ಆರ್ಥಿಕ ಪರಿಸ್ಥಿತಿ ಇನ್ನೂ ಸಹಜ ಸ್ಥಿತಿಗೆ ಬಂದಿಲ್ಲ. 2020-21ನೇ ಸಾಲಿನ ಖಾಸಗಿ ಶಾಲೆಗಳ ಶುಲ್ಕದಲ್ಲಿ ಶೇ 30ರಷ್ಟು ವಿನಾಯಿತಿ ನೀಡಲಾಗಿತ್ತಾದರೂ, ಈಗ ನ್ಯಾಯಾಲಯವು ಅದನ್ನು ಶೇ 15ಕ್ಕೆ ಇಳಿಸಿರುವುದು ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಆತಂಕ ಸೃಷ್ಟಿಸಿದೆ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಶೇ 30ರಷ್ಟು ವಿನಾಯಿತಿ ಸಿಗುವಂತೆ ಮಾಡಲು ಖಾಸಗಿ ಶಾಲೆಗಳೊಂದಿಗೆ ಮಾತುಕತೆ ನಡೆಸಬೇಕು ಎಂದು ಆಗ್ರಹಿಸಿದರು.
ಲಾಕ್ಡೌನ್ ಅವಧಿಯ ಶಿಕ್ಷಕರ ವೇತನ ನೀಡಬೇಕಾದ ಹೊರೆಯು ಖಾಸಗಿ ಶಾಲೆಗಳ ಮೇಲಿದ್ದು, ಅದನ್ನು ಸರ್ಕಾರ ಭರಿಸಿದರೆ ಶಾಲಾ ಶುಲ್ಕದಲ್ಲಿ ವಿನಾಯಿತಿ ನೀಡಲು ಶಾಲೆಗಳು ಸಿದ್ಧವಾಗಿವೆ. ರಾಜ್ಯ ಸರ್ಕಾರವು ನ್ಯಾಯಾಲಯದಲ್ಲಿ ತೋರಿದ ಉದಾಸೀನದಿಂದಾಗಿ, ಶೇ. 15ರಷ್ಟು ಮಾತ್ರ ವಿನಾಯಿತಿ ಸಿಕ್ಕಿದೆ. ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರು ತಕ್ಷಣವೇ ಶಿಕ್ಷಣ ಹಾಗೂ ಕಾನೂನು ತಜ್ಞರ ಜೊತೆ ಸಭೆ ನಡೆಸಿ, ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವ ಕುರಿತು ಚರ್ಚಿಸಬೇಕು ಎಂದು ಪೃಥ್ವಿ ರೆಡ್ಡಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬೆಂಗಳೂರು ಎಎಪಿ ಅಧ್ಯಕ್ಷ ಮೋಹನ್ ದಾಸರಿಯವರು ಮಾತನಾಡಿ ಶುಲ್ಕವನ್ನು ಪಾವತಿಸದ ಕಾರಣ ಯಾವುದೇ ಮಗು ಶಾಲೆಗೆ ಅಥವಾ ಆನ್ಲೈನ್ ತರಗತಿಗಳಿಗೆ ಹಾಜರಾಗುವುದನ್ನು ತಡೆಯಬಾರದು ಎಂದು ನ್ಯಾಯಾಲಯ ಹೇಳಿರುವುದು ಸ್ವಾಗತಾರ್ಹ. ಇದು ಕಟ್ಟುನಿಟ್ಟಾಗಿ ಜಾರಿಗೆ ಬರುವಂತೆ ಮಾಡಬೇಕಾದ ಜವಾಬ್ದಾರಿಯಿಂದ ಸರ್ಕಾರ ನುಣುಚಿಕೊಳ್ಳಬಾರದು. ಆಮ್ ಆದ್ಮಿ ಪಾರ್ಟಿಯು ದೀರ್ಘಕಾಲದಿಂದ ಪೋಷಕರ ಜೊತೆಗಿದೆ, ಮುಂದೆಯೂ ಇರುತ್ತೇವೆ. ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರ ಹಿತಕ್ಕಾಗಿ ರಾಜ್ಯಾದ್ಯಂತ 45 ದಿನಗಳ ಕಾಲ ಸಹಿಸಂಗ್ರಹ ಅಭಿಯಾನ ನಡೆಸಿ, 1 ಲಕ್ಷಕ್ಕೂ ಹೆಚ್ಚು ಸಹಿ ಸಂಗ್ರಹಿದ್ದೇವೆ ಎಂದು ಹೇಳಿದರು.
ಎಎಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಚಿತ್ ಸೆಹವಾನಿ, ಎಎಪಿಯ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ, ಪೋಷಕರ ಸಮನ್ವಯ ಸಮಿತಿಯ ಚಿದಾನಂದ್, ಎಎಪಿ ಮುಖಂಡರಾದ ಉಷಾ ಮೋಹನ್, ಪ್ರಕಾಶ್ ನೆಡುಂಗಡಿ, ಬಿ.ಟಿ.ನಾಗಣ್ಣ, ಸುರೇಶ್ ರಾಥೋಡ್, ದರ್ಶನ್ ಜೈನ್ ಹಾಗೂ ಅನೇಕ ಮುಖಂಡರು, ಕಾರ್ಯಕರ್ತರು, ಪೋಷಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.