Publish Date: Tue, 04 Sep 2018 (15:29 IST)
Updated Date: Tue, 04 Sep 2018 (15:32 IST)
ಅಕ್ರಮ ಸಾರಾಯಿ ದಾಸ್ತಾನು ಹಾಗೂ ಮಾರಾಟದ ವಿರುದ್ಧ ರೊಚ್ಚಿಗೆದ್ದ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ಕಾರವಾರ ಜಿಲ್ಲೆಯ ಸಿದ್ದಾಪುರ ತಾಲೂಕಿನ ಇಟಗಿಯಲ್ಲಿ ಜರುಗಿದೆ.
ಹಲವಾರು ವರ್ಷಗಳಿಂದ ಅಕ್ರಮ ಸಾರಾಯಿ ಜಾಲ ತಾಲೂಕಿನಾದ್ಯಂತ ತಲೆ ಎತ್ತಿದ್ದು, ಇದನ್ನು ತಡೆಯಬೇಕಾದ ಅಬಕಾರಿ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಈ ಅಕ್ರಮ ಸಾರಾಯಿಯಿಂದ ಇಲಾಖೆಗೂ ಹಣ ಸಂದಾಯವಾಗುತ್ತಿದ್ದು, ಇಲಾಖೆ ಕೂಡ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದೆ. ನಾವು ಈಗಾಗಲೇ ಹಲವಾರು ಬಾರಿ ಮನವಿ ಸಲ್ಲಿಸಿದರೂ ಕೂಡ ಅಕ್ರಮ ಸಾರಾಯಿ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದೆ. ಇಟಗಿ ಗ್ರಾಮ ಪಂಚಾಯತ್ ಅಧ್ಯಕ್ಷನೇ ಸ್ವತಃ ಈ ಕೆಲಸ ಮಾಡುತ್ತಿದ್ದು, ಇನ್ನು 10 ದಿನದೊಳಗಾಗಿ ಈ ದಂಧೆ ಯನ್ನು ನಿಲ್ಲಿಸಿ ಅವರನ್ನು ಬಂಧಿಸಬೇಕು.
ಇಲ್ಲದಿದ್ದರೆ ಉಗ್ರವಾಗಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಪ್ರತಿಭಟನಾನಿರತರು ಎಚ್ಚರಿಕೆ ನೀಡಿದರು. ಈ ಕುರಿತು ಗ್ರಾಮ ಪಂಚಾಯತ್, ಅಬಕಾರಿ ನಿರೀಕ್ಷಕರು ಹಾಗೂ ಪೊಲೀಸ್ ಇಲಾಖೆಗೆ ಮನವಿಯನ್ನು ಕೂಡ ಸಲ್ಲಿಸಲಾಯಿತು.