Publish Date: Tue, 28 Aug 2018 (16:21 IST)
Updated Date: Tue, 28 Aug 2018 (16:32 IST)
ವೈದ್ಯರನ್ನು ಈಗಿನ ಕಾಲದಲ್ಲಿ ಆರೋಗ್ಯವನ್ನು ಕಾಪಾಡುವ ದೇವರೆಂದು ನಂಬಿದ್ದಾರೆ. ಅದರಂತೆ ಸರಕಾರ ಬಡವರ ಆರೋಗ್ಯಕ್ಕಾಗಿ ಎಲ್ಲ ಬೇಕು, ಬೇಡ ಸೌಲಭ್ಯಗಳೊಂದಿಗೆ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕೆಂಬ ಉದ್ದೇಶದಿಂದ ಎಲ್ಲವನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಸಿಗುವ ಹಾಗೆ ಮಾಡಿದೆ. ಆದರೆ ಕೆಲವು ಸರಕಾರಿ ಆಸ್ಪತ್ರೆಗಳಲ್ಲಿರುವ ವೈದ್ಯರು ಸರಕಾರ ತಮಗೆ ತಿಂಗಳ ಸಂಬಳ ತಪ್ಪದೆ ನೀಡುತ್ತಿದ್ದರೂ ಸಹ ಬಡವರು ಕೂಲಿ ನಾಲಿ ಮಾಡಿ ಬಂದ ಹಣಕ್ಕೆ ಬೆನ್ನು ಹತ್ತಿದ್ದಾರೆ.
ಸರಕಾರ ನೀಡುವ ಸಂಬಳದ ಜೊತೆ ಗಿಂಬಳದ ಬೆನ್ನು ಹತ್ತಿರುವ ವೈದ್ಯಾಧಿಕಾರಿಯನ್ನು ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಬೇಟಗೇರಿ ಗ್ರಾಮದಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಕಾಣಬಹುದು ಎಂದು ಸ್ಥಳೀಯರು ದೂರಿದ್ದಾರೆ. ದಿನಾಲು ಈ ಆಸ್ಪತ್ರೆಗೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಂದ ಸಾರ್ವಜನಿಕರು ತಮ್ಮ ಆರೋಗ್ಯ ತಪಾಸಣೆಗಾಗಿ ಬರುತ್ತಾರೆ. ಆದರೆ ಇಲ್ಲಿನ ವೈದ್ಯಾದಿಕಾರಿ ರಾಜಶ್ರೀ ಹಿರೇಮಠ ಅವರ ಬಳಿ ತಪಾಸಣೆಗೆ ಅಂತಾ ರೋಗಿಗಳು ಹೋದರೆ ಮೊದಲು ನೀವು ಎಷ್ಟು ಹಣ ತಂದಿದ್ದೀರಿ ಎಂದು ಕೇಳುತ್ತಾರಂತೆ. ದುಡ್ಡು ಕೇಳಿ ಆ ಬಳಿಕ ತಪಾಸಣೆ ಮತ್ತು ಚಿಕಿತ್ಸೆ ಮಾಡುತ್ತಾರೆ ಎಂದು ರೋಗಿಗಳು ದೂರಿದ್ದಾರೆ. ಸರಕಾರಿ ಆಸ್ಪತ್ರೆಯಲ್ಲಿ ಮಾತ್ರೆಗಳನ್ನು ಕೊಡುವುದನ್ನು ಬಿಟ್ಟು, ಬೇರೆ ಔಷಧ ಅಂಗಡಿಗಳಲ್ಲಿ ಚೀಟಿ ಬರೆದುಕೊಟ್ಟು ಮಾತ್ರೆ ತರುವಂತೆ ಹೇಳುತ್ತಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.