Publish Date: Mon, 19 Sep 2022 (17:50 IST)
Updated Date: Mon, 19 Sep 2022 (17:53 IST)
ಬೆಂಗಳೂರು ಜನತೆಗೆ ಮೋಸ ಮಾಡಿರುವುದನ್ನು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬೆಂಗಳೂರು ಜನತೆಗೆ ಏನಾದರೂ ಮೋಸ ಮಾಡಿರುವುದನ್ನು ಸಾಬೀತುಪಡಿಸಿದರೆ ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ ಎಂದರು.
ಬೆಂಗಳೂರಿನಲ್ಲಿ ಒತ್ತುವರಿ ತೆರವು ಮಾಡುವ ವಿಚಾರವನ್ನು ಸದನದಲ್ಲಿ ಪ್ರಸ್ತಾಪ ಮಾಡಿದ್ದೇನೆ. ಆ ರೀತಿ ನನ್ನ ಅವಧಿಯಲ್ಲಿ ಬೆಂಗಳೂರಿಗೆ ಮೋಸ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಸರ್ಕಾರಕ್ಕೆ ನೂರಾರು ಕೋಟಿ ನಷ್ಟ ಆಗಿರುವ ಹಗರಣವೊಂದರ ಬಗ್ಗೆ ಪ್ರಸ್ತಾಪಿಸಲು ವಿಧಾನಸಭಾಧ್ಯಕ್ಷರಲ್ಲಿ ಅವಕಾಶ ಕೋರಲಾಗಿದೆ. ನಾಳೆ ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ. ಅವಕಾಶ ಕೊಟ್ಟರೆ ದಾಖಲೆ ಸಹಿತ ಪ್ರಸ್ತಾಪ ಮಾಡುತ್ತೇನೆ ಎಂದರು.
ಸರ್ಕಾರದ ಒಂದು ತೀರ್ಮಾನದಿಂದ ನೂರಾರು ಕೋಟಿ ರೂ. ನಷ್ಟವಾಗಿದ್ದು, ಈ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಲು ಸಭಾಧ್ಯಕ್ಷರು ಅವಕಾಶ ಕೊಡಬೇಕಿದೆ ಎಂದು ಹೇಳಿದರು.