Publish Date: Wed, 22 Feb 2023 (18:42 IST)
Updated Date: Wed, 22 Feb 2023 (18:45 IST)
ಪೊಲೀಸ್ ಇಲಾಖೆಯಲ್ಲಿ ತಮ್ಮ ಕಟ್ಟುನಿಟ್ಟಿನ ಕ್ರಮ ವಿನೂತನ ಪ್ರಯತ್ನಗಳ ಮೂಲಕ ಸುದ್ದಿಯಲ್ಲಿರುವ ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ಮತ್ತೊಂದು ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಇನ್ಮುಂದೆ ಆಗ್ನೇಯ ವಿಭಾಗದ ಪೊಲೀಸ್ ಸಿಬ್ಬಂದಿ ತಮ್ಮ ಮೊಬೈಲ್ ಫೋನ್ಗೆ ಬರುವ ಕರೆಗಳನ್ನ ಸ್ವೀಕರಿಸದೇ ಇರುವಂತಿಲ್ಲ. ಜೊತೆಗೆ ತಮ್ಮ ವಾಟ್ಸ್ಯಾಪ್ ಡಿಸ್ಪ್ಲೇ ಪಿಕ್ಚರ್ ನಲ್ಲಿ ತಮ್ಮ ಫೋಟೊ ಹಾಕುವಂತಿಲ್ಲ. ಕರೆ ಸ್ವೀಕರಿಸದೇ ಇದ್ದಲ್ಲಿ ಸಿಬ್ಬಂದಿಗಳಿಗೆ ಸಂಕಷ್ಟ ಉಂಟಾಗಲಿದೆ. ಇನ್ನುಮುಂದೆ ಆಗ್ನೇಯ ವಿಭಾಗದ ಎಲ್ಲಾ ಪೊಲೀಸರು ಲೋಕಸ್ಪಂದನ ಎಂಬ ಕ್ಯೂಆರ್ ಕೋಡನ್ನ ತಮ್ಮ ವಾಟ್ಸ್ಯಾಪ್ ಡಿಪಿಯಲ್ಲಿ ಹಾಕಬೇಕು. ತಮ್ಮ ವಿಭಾಗದ ಪೊಲೀಸ್ ಸಿಬ್ಬಂದಿಯ ಕಾರ್ಯವೈಖರಿ ಕುರಿತು ಮಾಹಿತಿ ಪಡೆಯಲು ಸಿದ್ಧಪಡಿಸಿರುವುದೇ ಈ ಲೋಕಸ್ಪಂದನ ವ್ಯವಸ್ಥೆ. ಪೊಲೀಸರ ಕುರಿತು ಸಾರ್ವಜನಿಕರು ಏನಾದರೂ ಮೆಚ್ಚುಗೆ ವ್ಯಕ್ತಪಡಿಸುವುದಿರಲಿ, ಅಥವಾ ಆಕ್ಷೇಪ ವ್ಯಕ್ತಪಡಿಸುವುದಿರಲಿ ಲೋಕಸ್ಪಂದನ ವ್ಯವಸ್ಥೆಯ ಮೂಲಕ ಮಾಡಬಹುದು
ಪೊಲೀಸರು ಸಾರ್ವಜನಿಕರ ಫೋನ್ ಕರೆ ಸ್ವೀಕರಿಸದೇ ಇದ್ದರೆ ಸಾರ್ವಜನಿಕರು ಆ ಅಧಿಕಾರಿಯ ವಾಟ್ಸ್ಯಾಪ್ ಡಿಪಿಯಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಬೇಕು. ಬಳಿಕ ಮೆಸೆಜ್ ವ್ಯವಸ್ಥೆ ಲಭ್ಯವಾಗಲಿದೆ. ಅಲ್ಲಿ ನಿಮ್ಮ ಅಧಿಕಾರಿ ಪೋನ್ ಕರೆ ಸ್ವೀಕರಿಸುತ್ತಿಲ್ಲ ಎಂದು ಮೆಸೆಜ್ ರವಾನಿಸಿದರೆ, ನೇರವಾಗಿ ಆ ಮೆಸೆಜ್ ಡಿಸಿಪಿ ಸಿ.ಕೆ.ಬಾಬಾರ ಮೊಬೈಲ್ ಫೋನಿಗೆ ತಲುಪಲಿದೆ'
ಇದರಿಂದಾಗಿ ಯಾವ ಅಧಿಕಾರಿ ಸಾರ್ವಜನಿಕರಿಗೆ ಸೂಕ್ತ ಸ್ಪಂದನೆ ಮಾಡುತ್ತಿಲ್ಲ ಎಂಬುದನ್ನ ಸುಲಭವಾಗಿ ಪತ್ತೆ ಹಚ್ಚಿ ಅಂಥವರ ವಿರುದ್ಧ ಕ್ರಮ ಕೈಗೊಳ್ಳಬಹುದು. ಈ ಕ್ಯೂ ಆರ್ ಕೋಡ್ ಮೂಲಕ ಪೊಲೀಸರು ಇನ್ನಷ್ಟು ಜನಸ್ನೇಹಿಯಾಗಲು ಸಾಧ್ಯವಾಗಲಿದೆ ಎಂದಿರುವ ಆಗ್ನೇಯ ವಿಭಾಗ ಡಿಸಿಪಿ ಸಿ.ಕೆ.ಬಾಬಾ ಇಂದಿನಿಂದಲೇ ಈನೂತನ ವ್ಯವಸ್ಥೆ ಜಾರಿಗೊಳಿಸಿದ್ದು ಈ ಹೊಸ ಯೋಜನೆ ಎಷ್ಟು ಪರಿಣಾಮಕಾರಿಯಾಗಲಿದೆ ಎಂದು ಕಾದು ನೋಡಬೇಕಿದೆ.
geetha
Publish Date: Wed, 22 Feb 2023 (18:42 IST)
Updated Date: Wed, 22 Feb 2023 (18:45 IST)