Publish Date: Sat, 21 Jul 2018 (20:27 IST)
Updated Date: Sat, 21 Jul 2018 (20:30 IST)
ಕೊಡಗಿನಲ್ಲಿ ಹುಲಿ ಹಾವಳಿ ಮುಂದುವರೆದಿದೆ. ಹಾಡು ಹಗಲೇ ಗ್ರಾಮಕ್ಕೆ ಬಂದ ಹುಲಿಯೊಂದು ಹಸುವನ್ನು ಬೇಟೆಯಾಡಿದೆ. ಈ ಘಟನೆಯಿಂದ ಅಲ್ಲಿನ ಜನರು ಬೆಚ್ಚಿ ಬಿದ್ದಿದ್ದಾರೆ. ಹುಲಿ ಹಸುವನ್ನು ಬಲಿ ತೆಗೆದುಕೊಂಡು ಪರಾರಿಯಾದ ಘಟನೆ ಅವರೆಗುಂದ ಗ್ರಾಮದಲ್ಲಿ ನಡೆದಿದೆ. ವಿರಾಜಪೇಟೆ ತಾಲ್ಲೂಕಿನ ಅವರೆಗುಂದ ಗ್ರಾಮದಲ್ಲಿ ಘಟನೆ ನಡೆದಿದೆ.
ಅವರೇಗುಂದ ನಿವಾಸಿ ವೈ.ಕೆ ಮಾದ ಎಂಬವರಿಗೆ ಸೇರಿದ ಹಸುವನ್ನು ಮೇಯಲು ಬಿಟ್ಟ ಸಂದರ್ಭ ಹುಲಿ ದಾಳಿ ಮಾಡಿ ಕೊಂದು ಹಾಕಿದೆ. ಜೊತೆಯಲ್ಲಿ ಇದ್ದ ಮತ್ತೊಂದು ಹಸು ಪ್ರಾಣಾಪಯದಿಂದ ಪಾರಾಗಿ ಮನೆ ಸೇರಿದೆ. ರಸ್ತೆಯಲ್ಲಿ ತೆರಳುತ್ತಿದ್ದ ಮಂದಿ ಹುಲಿ ದಾಳಿಯನ್ನು ಕಂಡು ಭಯಭೀತರಾಗಿದ್ದಾರೆ. ಅಂದಾಜು ನಲವತ್ತು ಸಾವಿರ ಮೌಲ್ಯದ ಹಸು ಅದಾಗಿದ್ದು, ಹಾಲು ಮಾರಿ ಜೀವನ ನಡೆಸುತ್ತಿದ್ದ ಕುಟುಂಬ ಈಗ ಕಂಗಾಲಾಗಿದೆ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಹುಲಿ ಚಲನವಲನ ಗಮನಿಸಲು ಕ್ಯಾಮೆರಾ ಅಳವಡಿಸಿದ್ದಾರೆ. ಹಾಡುಹಗಲೇ ಗ್ರಾಮಕ್ಕೆ ಬಂದು ಜಾನುವಾರುಗಳನ್ನು ಬಲಿ ತೆಗೆದು ಕೊಳ್ಳುತ್ತಿರುವ ಹುಲಿಯನ್ನು ಸೆರೆ ಹಿಡಿಯಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.