Publish Date: Mon, 10 Jun 2019 (21:08 IST)
Updated Date: Mon, 10 Jun 2019 (21:10 IST)
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇದ್ದಕ್ಕಿದ್ದಂತೆ ವಿಮಾನ ಪ್ರಯಾಣ ರದ್ದುಗೊಳಿಸಿದ ಪರಿಣಾಮ ಪ್ರಯಾಣಿಕರು ಪರದಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ರಾತ್ರಿ 8.45 ಕ್ಕೆ ಮಂಗಳೂರಿನಿಂದ ಅಬುಧಾಬಿಗೆ ಏರ್ ಇಂಡಿಯಾ ವಿಮಾನ ತೆರಳಬೇಕಿತ್ತು. ವಿಮಾನದಲ್ಲಿ ಹವಾನಿಯಂತ್ರಣ ಯಂತ್ರ ಸರಿಯಿಲ್ಲ ಎಂಬ ಕಾರಣ ನೀಡಿ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿ, ಮುಂದಿನ ವಿಮಾನದವರೆಗೆ ಕಾಯುವಂತೆ ಹೇಳಲಾಗಿತ್ತು. ಇದರಿಂದ ದುಬೈ, ಅಭುದಾಬಿಗೆ ತೆರಳಬೇಕಿದ್ದ ಪ್ರಯಾಣಿಕರು ರಾತ್ರಿ ಜಾಗರಣೆ ಮಾಡುವಂತಾಯಿತು.
ಒಟ್ಟು 300 ಪ್ರಯಾಣಿಕರಿದ್ದು, ನಿರೀಕ್ಷಣಾ ಕೊಠಡಿಯಲ್ಲಿ ಕಾಯುವಂತಾಯಿತು. ಅಬುಧಾಬಿಗೆ ಹೋಗುವ ಫ್ಲೈ ಜೆಟ್ ವಿಮಾನ ಇದ್ದರೂ ಅದನ್ನು ವ್ಯವಸ್ಥೆ ಮಾಡಿರಲಿಲ್ಲ. ಅಲ್ಲದೇ ಹೊಟೇಲ್ ವ್ಯವಸ್ಥೆ ಕೂಡಾ ಮಾಡಿರಲಿಲ್ಲ.
ಟಿಕೆಟ್ ಹಣ ಮರುಪಾವತಿ ಬಗ್ಗೆಯೂ ವಿಮಾನ ನಿಲ್ದಾಣದ ಅಧಿಕಾರಿಗಳು ಪೂರ್ಣ ಭರವಸೆ ಕೊಡಲಿಲ್ಲ. ವಿಮಾನ ನಿಲ್ದಾಣದಲ್ಲಿಯೇ ಸರಿಯಾದ ವ್ಯವಸ್ಥೆ ಇಲ್ಲದೇ ಕಾಯುವಂತಾಯಿತು ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.