Publish Date: Tue, 30 Nov 2021 (17:08 IST)
Updated Date: Tue, 30 Nov 2021 (15:06 IST)
ಒಂದು ಕಡೆ ಶಿಕ್ಷಣ ಸಂಸ್ಥೆಗಳಲ್ಲಿ ಕೋವಿಡ್-19 ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಮತ್ತೊಂದು ಕಡೆ ವಿಶ್ವವನ್ನೇ ತಲ್ಲಣಗೊಳಿಸಿರುವ ಹೊಸ ವೈರಸ್ ಓಮಿಕ್ರಾನ್ ಭೀತಿಯಿಂದಾಗಿ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.ದೀಪಾವಳಿ ಹಬ್ಬದ ನಂತರ ನಿಧಾನವಾಗಿ ಶಾಲಾಕಾಲೇಜುಗಳಲ್ಲಿ ಯಥಾಸ್ಥಿತಿ ಮರುಕಳಿಸುತ್ತಿತ್ತು. ಪೋಷಕರು ಆತಂಕದ ನಡುವೆಯೇ ಮಕ್ಕಳನ್ನು ಹಂತ ಹಂತವಾಗಿ ಶಾಲೆಗೆ ಕಳುಹಿಸುತ್ತಿದ್ದರು. ಪರಿಣಾಮ ಒಂದೂವರೆ ವರ್ಷದಿಂದ ಮುಚ್ಚಿದ್ದ ಶಾಲಾಕಾಲೇಜುಗಳಲ್ಲಿ ದೈನಂದಿನ ಚಟುವಟಿಕೆಗಳು ಹೆಚ್ಚಾಗಿದ್ದವು.
ಇನ್ನೇನು ಯಥಾಸ್ಥಿತಿ ಬಂದೇಬಿಟ್ಟಿತು ಎಂದು ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿರುವಾಗಲೇ ಮಹಾಮಾರಿ ಓಮಿಕ್ರಾನ್ ಭೂತ ಎಲ್ಲರಲ್ಲೂ ಭೀತಿ ಹುಟ್ಟಿಸಿರುವುದರಿಂದ ಮಕ್ಕಳನ್ನು ಶಾಲೆಗೆ ಕಳುಹಿಸಲು ಮೀನಾಮೇಷ ಎಣಿಸುತ್ತಿದ್ದಾರೆ. ಸದ್ಯದ ಅಂಕಿ ಅಂಶಗಳ ಪ್ರಕಾರ ಓಮಿಕ್ರಾನ್ ದಕ್ಷಿಣ ಆಫ್ರಿಕಾದ ಬೋಟ್ಸಾನ ಸೇರಿದಂತೆ 13 ರಾಷ್ಟ್ರಗಳಲ್ಲಿ ಮಾತ್ರ ಈ ಸೋಂಕು ಕಾಣಿಸಿಕೊಂಡಿದೆ. ಸಮಾಧಾನಕರ ಅಂಶವೆಂದರೆ ಭಾರತದಲ್ಲಿ ಈವರೆಗೂ ಎಲ್ಲಿಯೂ ಕಾಣಿಸಿಕೊಂಡಿಲ್ಲ.