Publish Date: Fri, 23 Jul 2021 (19:30 IST)
Updated Date: Fri, 23 Jul 2021 (19:38 IST)
ಬೆಂಗಳೂರು: ಬೈಕ್ ಟ್ಯಾಕ್ಸಿ ಸೇವೆಗೆ ರಾಜ್ಯ ಮೋಟಾರು ವಾಹನ ಕಾಯ್ದೆಯಲ್ಲಿ ಅವಕಾಶ ಇಲ್ಲದಿದ್ದರೂ ಸರ್ಕಾರ ಹೊಸದಾಗಿ ಆದೇಶ ಮಾಡಿ ಬೈಕ್ ಟ್ಯಾಕ್ಸಿ ಸೇವೆಗೆ ಅವಕಾಶ ನೀಡಲು ಮುಂದಾಗಿದೆ. ಇದರಿಂದ ಲಕ್ಷಾಂತರ ಆಟೋ ಮತ್ತು ಟ್ಯಾಕ್ಸಿ ಚಾಲಕರು ಬೀದಿಗೆ ಬೀಳಲಿದ್ದಾರೆ. ಸರ್ಕಾರದ ಈ ನಡೆ ಬೈಕ್ ಹಾಗೂ ಟ್ಯಾಕ್ಸಿ ಸಂಸ್ಥೆಗಳೊಂದಿಗೆ ಲಾಭಿ ನಡೆಸಿ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡಲು ಹೊರಟಿರುವ ಹಾಗೆ ಕಾಣುತ್ತಿದೆ ಎಂದು ಓಲಾ ಉಬರ್ ಚಾಲಕರ ಮತ್ತು ಮಾಲೀಕರ ಸಂಘದ ಸಂಸ್ಥಾಪಕ ಅಧ್ಯಕ್ಷ ತನ್ವೀರ್ ಪಾಷಾ ಆರೋಪಿಸಿದರು.
ಈ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ ಕೆಎಚ್ ರಸ್ತೆ (ಡಬಲ್ ರೋಡ್)ಯಲ್ಲಿರುವ ಸಂಘಟನೆಯ ಮುಖ್ಯ ಕಚೇರಿಯಿಂದ ಸಾರಿಗೆ ಆಯುಕ್ತರ ಕಚೇರಿಯವರೆಗೆ 200ಕ್ಕೂ ಅಧಿಕ ಚಾಲಕರು ಹಾಗೂ ಸಂಘದ ಪದಾಧಿಕಾರಿಗಳು ಕಾಲ್ನಡಿಗೆ ಮೂಲಕ ತೆರಳಿ ಯೋಜನೆ ಕೂಡಲೆ ಹಿಂಪಡೆಯುವಂತೆ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಸರ್ಕಾರ ಯೋಜನೆ ಹಿಂಪಡೆಯದಿದ್ದರೆ ಅತೀ ಶೀಘ್ರದಲ್ಲೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ. ಹಲವಾರು ವರ್ಷಗಳಿಂದ ಓಲಾ ಊಬರ್ ಸಂಸ್ಥೆಗಳು ಕಾನೂನು ಉಲ್ಲಂಘನೆ ಮಾಡುತ್ತಿದ್ದರೂ ಕಣ್ಮುಚ್ಚಿ ಕುಳಿತಿದ್ದ ಅಧಿಕಾರಿಗಳು, ಇತ್ತೀಚಿನ ದಿನಗಳಲ್ಲಿ ಓಲಾ ಸಂಸ್ಥೆ ನಿಯಮ ಉಲ್ಲಂಘನೆ ಮಾಡುತ್ತಿದೆ ಎಂದು ಅಮಾಯಕ ಚಾಲಕರ ವಾಹನಗಳನ್ನು ಹಿಡಿದು ಅವರಿಗೆ ತೊಂದರೆ ನೀಡುತ್ತಿದೆ. ಇದನ್ನು ನಿಲ್ಲಿಸಬೇಕೆಂದು ಆಯುಕ್ತರಿಗೆ ಒತ್ತಾಯಿಸಿದ್ದೇವೆ ಎಂದು ಹೇಳಿದರು.