Publish Date: Wed, 08 Nov 2017 (13:51 IST)
Updated Date: Wed, 08 Nov 2017 (13:54 IST)
ಬೆಂಗಳೂರು: ನೋಟ್ ಬ್ಯಾನ್ ನಿಂದ ಒಂದು ವರ್ಷದಿಂದ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿ ಸಾಯಿಸಿದ್ರಿ. ಕೊಲೆಗಾರರು ನೀವು ಕೇಂದ್ರ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ವಾಗ್ದಾಳಿ ನಡೆಸಿದ್ದಾರೆ.
ಫ್ರೀಡಂಪಾರ್ಕ್ ನಲ್ಲಿ ಕರಾಳದಿನ ಆಚರಿಸಿ ಮಾತನಾಡಿದ ಅವರು, ಯಡಿಯೂರಪ್ಪಗೆ ಜಿಎಸ್ ಟಿ ಅರ್ಥವಾಗಲ್ಲ ಪಾಪ. ಅವರಿಗೆ ಏನಿದ್ರು ವಿಕ್ಟರಿ ಸಿಂಬಾಲ್ ತೋರಿಸೋದು ಮಾತ್ರ ಗೊತ್ತು. ಒಳಗೆ ಹೋಗುವಾಗಲು, ಹೊರಗೆ ಬರುವಾಗಲು ಅದನ್ನೇ ತೋರಿಸೋದು ಅಷ್ಟೇ ಎಂದು ಬಿಎಸ್ ವೈ ಬಗ್ಗೆ ವ್ಯಂಗ್ಯವಾಡಿದ್ದಾರೆ.
2ಲಕ್ಷ 40 ಸಾವಿರ ಕಂಪನಿಗಳು ಮುಚ್ಚಿವೆ ಎಂದು ಬಿಜೆಪಿ ಸರ್ಕಾರದವರೇ ಹೇಳಿದೆ. ನೀವು ಅಧಿಕಾರ ಪಡೆದುಕೊಂಡಾಗ 7 ಇದ್ದ ಜಿಡಿಪಿ, ಇವತ್ತು 5 ಅಂತ ಬರೆಸಿಕೊಂಡಿದ್ದೀರಿ. ಆದರೆ 3.5 ಇದೆ. ನೋಟ್ ಬ್ಯಾನ್ ನಿಂದ ಶೇ.2 ರಷ್ಟು ಜಿಡಿಪಿ ಕಡಿಮೆ ಆಗುತ್ತೆ ಎಂದು ಡಾ. ಮನಮೋಹನ್ ಸಿಂಗ್ ಹೇಳಿದ್ದರು. ದೇಶ ಸಂಕಷ್ಟಕ್ಕೆ ಸಿಲುಕುತ್ತೆ ಎಂದಿದ್ರು. ಅವರು ಹೇಳಿದಂತೆ ಆಗಿದೆ.
2013 ರಲ್ಲಿ ಜನ ಬದಲಾವಣೆ ಬಯಸಿದ್ರು. ನರೇಂದ್ರ ಮೋದಿ ಕನಸನ್ನು ಮಾರಾಟ ಮಾಡಿ, ಮರಳು ಮಾಡಿದ್ರು. ಆದರೆ ಅಧಿಕಾರಕ್ಕೆ ಬಂದಮೇಲೆ ಬಣ್ಣ ಬದಲಾಯಿಸಿದ್ರು. ಈ ದೇಶದ ಜನಕ್ಕೆ ಅನೇಕ ಸುಳ್ಳು ಹೇಳಿದ್ರು. ಕಾಂಗ್ರೆಸ್ ನವರು ಕಪ್ಪು ಹಣ ಹೊರದೇಶದಲ್ಲಿಟ್ಟಿದ್ದಾರೆ. ಆದ್ರೆ ಈವರೆಗೆ ಹೊರದೇಶದಲ್ಲಿರುವ ಹಣ ತರಲಿಲ್ಲ. ಕಪ್ಪು ಹಣ ಎಷ್ಟಿದೆ ಎಂದು ಲೆಕ್ಕ ಹೇಳಲು ಅವರಿಂದ ಸಾಧ್ಯವಾಗಿಲ್ಲ. ನೋಟ್ ಬ್ಯಾನ್ ನಿಂದ ನೂರಾರು ಜನ ಸತ್ತು, ಅವರ ಕುಟುಂಬಕ್ಕೆ ಪರಿಹಾರ ಕೊಟ್ಟೀದ್ದೀರ. ಯಾವ ಪುರುಷಾರ್ಥಕ್ಕೆ ಅಮಾನ್ಯೀಕರಣ ಮಾಡಿದ್ದೀರಿ ಎಂದು ಪ್ರಶ್ನಿಸಿದರು.
ಪರಮೇಶ್ವರ್ ಅವರನ್ನ ಬಿಜೆಪಿಗೆ ಆಹ್ವಾನಿಸ್ತೀನಿ ಎಂದು ಸಿ.ಟಿ.ರವಿ ಹೇಳಿದ್ದಾರೆ. ಸಿ.ಟಿ.ರವಿ ಸಿಕ್ಕಿದಾಗ ಕೇಳಿದೆ, ಮಾತಾಡೋಕೆ ಬೇರೆ ವಿಷಯ ಇರಲಿಲ್ಲ. ಅದಕ್ಕೆ ನಿಮ್ಮ ವಿಷಯ ಮಾತಾಡಿದೆ ಎಂದರು. ನನ್ನ ರಕ್ತದಲ್ಲಿ ಕಾಂಗ್ರೆಸ್ ಇದೆ. ಬಿಜೆಪಿಗೆ ನನ್ನನ್ನು ಕರೆಯುವ ಮಾತಾಡಬೇಡಿ. ಪರಮೇಶ್ವರ್ ವಿಚಾರ ಮಾತಾಡುವಾಗ ಎಚ್ಚರಿಕೆಯಿಂದ ಇರಿ. ಸಿಟಿ ರವಿನಾ ನಾನು ಕಾಂಗ್ರೆಸ್ ಗೆ ಕರಿಯಲ್ಲ, ಅವರು ಅಲ್ಲೇ ಇರಬೇಕು ಅಲ್ಲೇ ಸಾಯಬೇಕು ಎಂದರು.