Publish Date: Wed, 08 Nov 2017 (11:52 IST)
Updated Date: Wed, 08 Nov 2017 (12:01 IST)
ಬೆಂಗಳೂರು: ಕಳೆದ ವರ್ಷ ಪ್ರಧಾನಿಯವರು ನೋಟು ಅಮಾನ್ಯೀಕರಣ ಮಾಡಿದ್ದು, ಇದೊಂದು ಐತಿಹಾಸಿಕ ದಿನ. ಈ ದಿನವನ್ನು ಕಪ್ಪುಹಣ ವಿರೋಧಿ ದಿನವಾಗಿ ಆಚರಿಸುತ್ತಿದ್ದೇವೆ. ನೋಟು ಅಪನಗದೀಕರಣ ಎಂಬುದು ಭ್ರಷ್ಟಾಚಾರದ ವಿರುದ್ದ ಸಾಮಾನ್ಯ ಪ್ರಜೆಯ ಯುದ್ಧ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್, ಕಾಂಗ್ರೆಸ್ ನವರು ಕಪ್ಪು ಹಣ ಬೆಂಬಲಿಸುವ ದಿನ ಆಚರಿಸುತ್ತಿದ್ದಾರೆ. ಜನ ನೋಟ್ ಬ್ಯಾನ್ ಒಪ್ಪಿದ್ದಾರೆ. ಮೋದಿಯವರು ಪ್ರಾಮಾಣಿಕರ ಪರವಾಗಿ, ಬಡವರ ಪರವಾಗಿ ಹೋರಾಟ ಮಾಡ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಈಗ ಭ್ರಷ್ಟಾಚಾರ, ಭ್ರಷ್ಟಾಚಾರಿಗಳಿಗಾಗಿಯೇ ಇದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ನೋಟ್ ಬ್ಯಾನ್ ನಂತರ ಡಿಜಿಟಲ್ ಆರ್ಥಿಕತೆ ಬೆಳವಣಿಗೆ ಆಗಿದೆ. ನೋಟ್ ಬ್ಯಾನ್ ಆಗುವ ಮೊದಲು ದೇಶದಲ್ಲಿ ಮೂರು ಕೋಟಿ ಕ್ರೆಡಿಟ್ ಕಾರ್ಡ್ ಇದ್ದವು. ನೋಟ್ ಬ್ಯಾನ್ ನಂತರ ಕ್ರೆಡಿಟ್ ಕಾರ್ಡ್ ಗಳ ಸಂಖ್ಯೆ 23 ಕೋಟಿ ಆಗಿದೆ. ಡೆಬಿಟ್ ಕಾರ್ಡ್ ಗಳ ಸಂಖ್ಯೆಯೂ ಗಣನೀಯವಾಗಿ ಹೆಚ್ಚಿದೆ ಎಂದರು.
ಕಾಂಗ್ರೆಸ್ ಅವಧಿಯಲ್ಲಿ 2G ಹಗರಣ, ಕಲ್ಲಿದ್ದಲು ಹಗರಣಗಳು ನಡೆದಿದ್ದವು. ಲಕ್ಷಾಂತರ ಕೋಟಿ ಮೊತ್ತದ ಹಗರಣಗಳನ್ನು ಆಗಿನ ಕಾಂಗ್ರೆಸ್ ಸರ್ಕಾರ ಮಾಡಿತ್ತು. ನಾವು ಅವರ ಹಗರಣಗಳನ್ನು ಬಯಲು ಮಾಡಿದ್ದೆವು. ಕಾಂಗ್ರೆಸ್ ಭ್ರಷ್ಟಾಚಾರಕ್ಕೆ ಬೆಂಬಲ ನೀಡುವ ಪಕ್ಷ. ಹೀಗಾಗಿ ನೋಟ್ ಬ್ಯಾನ್ ಆದ ಈ ದಿನವನ್ನು ಕಾಂಗ್ರೆಸ್ ನವರು ಕರಾಳ ದಿನವನ್ನಾಗಿ ಆಚರಿಸುತ್ತಿದೆ ಎಂದರು.