Publish Date: Tue, 17 May 2022 (10:55 IST)
Updated Date: Tue, 17 May 2022 (10:57 IST)
ಬೆಂಗಳೂರು : ಸೂಕ್ತ ಕೆಲಸ ಸಿಗದೆ ವಿದ್ಯಾರ್ಥಿನಿಯೊಬ್ಬಳು ಉಡುಪಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು,
ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿಷಾದ ವ್ಯಕ್ತಪಡಿಸಿ, ಪ್ರಾಣಹಾನಿಯ ವಿಷಯದಲ್ಲಿ ನನಗೆ ರಾಜಕೀಯ ಮಾಡುವ ಇಚ್ಛೆಯಿಲ್ಲ ಎಂದು ಹೇಳಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಉಡುಪಿಯ 23 ವರ್ಷದ ಸಹನಾ ಆತ್ಮಹತ್ಯೆಯ ವಿಷಯ ತಿಳಿದು ದುಃಖವಾಗಿದೆ. ಎಂಬಿಎ ಪದವಿ ಪಡೆದರೂ ಸಹ ಸೂಕ್ತ ಕೆಲಸ ದೊರೆಯದೆ ಆಕೆ ಸಾವಿಗೆ ಶರಣಾಗಿದ್ದಾಳೆ.
ನಿರುದ್ಯೋಗದಿಂದ ಪ್ರಾಣಕಳೆದುಕೊಂಡಿರುವ ಪ್ರಕರಣ ರಾಜ್ಯದಲ್ಲಿ ಇದೇ ಮೊದಲಲ್ಲ. ಪ್ರಾಣಹಾನಿಯ ವಿಷಯದಲ್ಲಿ ನನಗೆ ರಾಜಕೀಯ ಮಾಡುವ ಇಚ್ಛೆಯಿಲ್ಲ ಎಂದು ಬರೆದುಕೊಂಡಿದ್ದಾರೆ.
ಇದೆಲ್ಲವು ಆಗುತ್ತಿರುವುದು ಯಾಕೆ? ನಮ್ಮ ಯುವಸಮೂಹ ಯಾಕೆ ಹತಾಶೆಯನ್ನು ಎದುರಿಸಬೇಕಿದೆ? ನೋಬೆಲ್ ಪುರಸ್ಕೃತರನ್ನು ಒಳಗೊಂಡಂತೆ ಜಗತ್ತಿನ ಹಲವು ಪ್ರಸಿದ್ಧ ಅರ್ಥಶಾಸ್ತ್ರಜ್ಞರು ಭಾರತೀಯರು. ಉದ್ಯೋಗವನ್ನು ಸೃಷ್ಟಿ ಮಾಡಲು ನಾವು ಅವರ ಪರಿಣತಿಯನ್ನು ಉಪಯೋಗಿಸಿಕೊಳ್ಳಬಹುದಲ್ಲವೆ ಎಂದು ಪ್ರಶ್ನಿಸಿದ್ದಾರೆ.