Publish Date: Tue, 17 Oct 2017 (20:13 IST)
Updated Date: Tue, 17 Oct 2017 (20:15 IST)
ಬೆಂಗಳೂರು: ರಾಜ್ಯದಲ್ಲಿ ಭಾರೀ ಮಳೆ ತಂದ ಅನಾಹುತ ಒಂದು ಕಡೆ ಸಮಸ್ಯೆಯಾದರೆ, ಇದರ ಜತೆಗೆ ಅನೇಕ ಸಮಸ್ಯೆಗಳವೂ ಇವೆ. ಆದರೆ ಇದರ ನಡುವೆ ವಿಧಾನಸೌಧ ವಜ್ರಮಹೋತ್ಸವವನ್ನು ಅದ್ಧೂರಿಯಾಗಿ ನಡೆಸಲು ಉದ್ದೇಶಿಸಿದ್ದ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಬ್ರೇಕ್ ಹಾಕಿದ್ದಾರೆ.
ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಇಂತಹ ಸಂದರ್ಭದಲ್ಲಿ ಅದ್ಧೂರಿ ಆಚರಣೆ ಮಾಡುವುದು ತಪ್ಪು. ಇದರಿಂದ ತಪ್ಪು ಸಂದೇಶ ರವಾನೆಯಾಗುತ್ತದೆ. ಕೋಟ್ಯಂತರ ರೂ. ವೆಚ್ಚ ಮಾಡುವುದು ಸರಿಯಲ್ಲ ಎಂದಿದ್ದಾರೆ.
ವಜ್ರಮಹೋತ್ಸವ ವೆಚ್ಚಕ್ಕೆ ವಿಧಾನಸಭೆ ಸಚಿವಾಲಯ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದು, 26 ಕೋಟಿ ರೂ. ನೀಡಲು ಕೋರಿದೆ. ಆದರೆ10 ಕೋಟಿ ಹಣ ನೀಡಲು ಸಿಎಂ ಸಮ್ಮತಿ ನೀಡುವ ಸಾಧ್ಯತೆಯಿದೆ. ಇದರ ನಡುವೆ ಚಿನ್ನದ ಬಿಸ್ಕತ್, ಬೆಳ್ಳಿ ಸಾಮಗ್ರಿ ಉಡುಗೊರೆ ನೀಡದಿರಲು ತೀರ್ಮಾನ ತೆಗೆದುಕೊಂಡಿದ್ದಾರೆ. ಇದರ ಬದಲು ವಿಧಾನಸೌಧ ಫಲಕ ಗಿಫ್ಟ್ ನೀಡಲು ಉದ್ದೇಶಿಸಲಾಗಿದೆ. ಚಿನ್ನದ ಬಿಸ್ಕತ್ ವಿಚಾರವಾಗಿ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ಕೇಳಿ ಬಂದಿತ್ತು. ಹೀಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.