Publish Date: Tue, 26 Sep 2017 (22:21 IST)
Updated Date: Tue, 26 Sep 2017 (22:24 IST)
ಬೆಂಗಳೂರು: ನಿಗಮ ಮಂಡಳಿ ಅಧ್ಯಕ್ಷರಾಗಿರುವ ಶಾಸಕರಿಗೆ ವಿಧಾನಸಭೆ ಸಚಿವಾಲಯದಿಂದ ಶಾಸಕ ಸ್ಥಾನಕ್ಕೆ ನೀಡುತ್ತಿದ್ದ ವೇತನಕ್ಕೆ ಕತ್ತರಿ ಬಿದ್ದಿದೆ. ಈ ಕುರಿತು ಸ್ಪೀಕರ್ ಕೆ.ಬಿ.ಕೋಳಿವಾಡ ಆದೇಶದ ಮೇರೆಗೆ ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ಅಧಿಕೃತ ಆದೇಶ ಹೊರಡಿಸಿದ್ದಾರೆ.
ಅಧ್ಯಕ್ಷರಾಗಿ ಇರುವ ಶಾಸಕರು ನಿಗಮದಿಂದಲೇ ವೇತನ ಪಡೆಯಬೇಕು. ವಿವಿಧ ಸಮಿತಿಗಳ ಸದಸ್ಯರಾಗಿ ಭತ್ಯೆ ಪಡೆಯಬಹುದು. ಶಾಸಕರಿಗೆ ವೇತನ, ಭತ್ಯೆ, ಪೆಟ್ರೋಲ್, ಮನೆ ಬಾಡಿಗೆ ನೀಡುತ್ತಾರೆ. ಶಾಸಕರು ನಿಗಮ ಮಂಡಳಿ ಅಧ್ಯಕ್ಷರಾಗಿ ಸಚಿವ ಸಂಪುಟ ದರ್ಜೆ ಸ್ಥಾನಮಾನ, ಭತ್ಯೆಗಳನ್ನು ಪಡೆಯುತ್ತಾರೆ. ಹೀಗಾಗಿ ಎರಡೆರಡು ಸಂಬಳ, ಭತ್ಯೆಗಳನ್ನು ಪಡೆಯುವುದಕ್ಕೆ ಸ್ಪೀಕರ್ ಬ್ರೇಕ್ ಹಾಕಿದ್ದಾರೆ.
ಇದು ಲಾಭದಾಯಕ ಹುದ್ದೆ ವ್ಯಾಪ್ತಿಗೆ ಒಳಪಡಲಿದೆ. ಇನ್ನು ಎರಡೆರಡು ಸಂಬಳ ಪಡೆದರೆ ಕಾನೂನಿನ ಉಲ್ಲಂಘನೆಯಾಗಲಿದೆ. ಇದಕ್ಕಾಗಿ ಒಂದು ಹುದ್ದೆಗೆ ಒಂದು ವೇತನ ಎಂಬ ಆದೇಶದಡಿ ವಿಧಾನಸಭೆ ಕಾರ್ಯದರ್ಶಿ ಈ ಆದೇಶ ಹೊರಡಿಸಿದ್ದಾರೆ.
ಒಂದುವೇಳೆ ಎರಡೆರಡು ವೇತನ, ಭತ್ಯೆ ಪಡೆದರೆ ಶಾಸಕರ ಸ್ಥಾನಕ್ಕೆ ಕುತ್ತು ಬೀಳಲಿದೆ. ಅಂದರೆ ಸರ್ಕಾರಕ್ಕೆ ಅನರ್ಹತೆ ಮಾಡುವ ಅವಕಾಶವಿದೆ. ಈ ಮೂಲಕ ಶಾಸಕರಾದ ಮಾಲೀಕಯ್ಯ ಗುತ್ತೇದಾರ್, ಆರ್.ವಿ.ದೇವರಾಜ್, ಎಂ.ಬಿ.ಟಿ.ನಾಗರಾಜ್, ಕೆ.ವಸಂತ ಬಂಗೇರ ಸೇರಿದಂತೆ 21 ಶಾಸಕರ ಡಬಲ್ ವೇತನಕ್ಕೆ ಕತ್ತರಿ ಬೀಳಲಿದೆ.