Publish Date: Sun, 26 May 2019 (11:59 IST)
Updated Date: Sun, 26 May 2019 (12:00 IST)
ಬೆಂಗಳೂರು : ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಪರಾಭವಗೊಂಡ ನಿಖಿಲ್ ಕುಮಾರಸ್ವಾಮಿ ಬೇಸರದಲ್ಲಿ ಮದ್ಯ ಸೇವಿಸಿ ರಂಪಾಟ ಮಾಡಿದ್ದಾರೆ ಎಂದು ಸುದ್ದಿಯಾಗಿದ್ದು, ಆದರೆ ಇದು ಸುಳ್ಳು ಸುದ್ದಿ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ನಿಖಿಲ್ ಸೋತ ನಂತರ ಮಾಜಿ ಪ್ರಧಾನಿ ದೇವೇಗೌಡರ ಮನೆಗೆ ತೆರಳಿ ಕೂಗಾಡಿದ್ದಾರೆ. ಅಲ್ಲದೆ, ಮೈಸೂರಿನ ಹೋಟೆಲ್ ನಲ್ಲಿ ತಂಗಿದ್ದ ಅವರು ಮದ್ಯ ಸೇವಿಸಿ ರಂಪಾಟ ಮಾಡಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿತ್ತು.
ಈ ಬಗ್ಗೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿದ ಸಿಎಂ ಕುಮಾರಸ್ವಾಮಿ, ಪ್ರಕಟಿಸಿದ ಸುದ್ದಿ ಅವಾಸ್ತವಿಕ ಹಾಗೂ ಕಪೋಲಕಲ್ಪಿತ. ನಿಖಿಲ್ ಚಾರಿತ್ರ್ಯವಧೆ ಮಾಡುವ ಈ ಸುದ್ದಿಯಿಂದ ಒಬ್ಬ ತಂದೆಯಾಗಿ ಅನುಭವಿಸಿದ ನೋವನ್ನು ಸಂಪಾದಕರ ಗಮನಕ್ಕೆ ತಂದಿದ್ದೇನೆ. ಮಾಧ್ಯಮಗಳು ಇಂತಹ ಸುಳ್ಳು ಸುದ್ದಿಗಳ ಮೂಲಕ ಭಾವನೆಗಳೊಂದಿಗೆ ಚೆಲ್ಲಾಟವಾಡದಿರಿ ಎನ್ನುವುದು ನನ್ನ ಕಳಕಳಿಯ ಮನವಿಯಾಗಿದೆ ಎಂದು ಹೇಳಿದ್ದಾರೆ.