Publish Date: Wed, 06 Oct 2021 (18:50 IST)
Updated Date: Wed, 06 Oct 2021 (18:53 IST)
ಮಾನವ ಕಳ್ಳ ಸಾಗಾಣಿಕೆ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಆರು ಮಂದಿ ಆರೋಪಿಗಳ ವಿರುದ್ಧ ಎನ್ಐಎ ವಿಶೇಷ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದೆ.
ತಮಿಳುನಾಡು ಮೂಲದ ದಿನಕರಣ್, ಕಾಶಿ ವಿಶ್ವನಾಥನ್, ರಸೊಲ್, ಸದ್ದಮ್ಹುಸೇನ್, ಅಬ್ದುಲ್ ಮುಹೀತು, ಸಾಕ್ರೆಟಿಸ್ ವಿರುದ್ಧ ಮಾನವ ಕಳ್ಳಸಾಗಾಣಿಕ ಪ್ರಕರಣದ ಸಂಬಂಧ ಎನ್ಐಎ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಲಾಗಿದೆ.
ಏನಿದು ಪ್ರಕರಣ?
ಶ್ರೀಲಂಕಾದ ಪ್ರಜೆಗಳು ಮಂಗಳೂರಿನ ಲಾಡ್ಜ್ವೊಂದರಲ್ಲಿ ಯಾವುದೇ ದಾಖಲೆಗಳಿಲ್ಲದೆ ಅಕ್ರಮವಾಗಿ ವಾಸವಿದ್ದರು. ಈ ವೇಳೆ ಮಂಗಳೂರು ದಕ್ಷಿಣ ಠಾಣೆ ಪೆÇಲೀಸರು ಜೂ.10ರಂದು ದಾಳಿ ನಡೆಸಿ 25 ಮಂದಿ ಶ್ರೀಲಂಕಾ ಪ್ರಜೆಗಳನ್ನು ಬಂಧಿಸಿದ್ದರು. ಅನಂತರದ ದಾಳಿಯಲ್ಲಿ ಹೆಚ್ಚುವರಿಯಾಗಿ 13 ಮಂದಿ ಶ್ರೀಲಂಕಾ ಪ್ರಜೆಗಳನ್ನು ಬಂಧಿಸಿ ವಿದೇಶಿ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದರು.
ಎನ್ಐಎ ಈ ಪ್ರಕರಣವನ್ನು ಕೈಗೆತ್ತಿಕೊಂಡು ತನಿಖೆ ನಡೆಸಿದ ವೇಳೆ 2021ರ ಫೆ. 27ರಿಂದ ಏ. 10ರವರೆಗೆ ಶ್ರೀಲಂಕಾದಿಂದ ಭಾರತಕ್ಕೆ 38 ಮಂದಿಯನ್ನು ಕಳ್ಳ ಸಾಗಾಣಿಕೆ ಮಾಡಿರುವುದು ಪತ್ತೆಯಾಗಿತ್ತು. ಕುಟುಂಬದೊಂದಿಗೆ ನಿಕಟ ಸಂಪರ್ಕವಿಲ್ಲದೆ ಬೇರ್ಪಟ್ಟಿರುವ ಶ್ರೀಲಂಕಾ, ತಮಿಳುನಾಡು, ಕೇರಳ ಹಾಗೂ ಕರ್ನಾಟಕದ ಪ್ರಜೆಗಳನ್ನು ಹಡಗಿನ ಮೂಲಕ ಕೆನಾಡ ದೇಶಕ್ಕೆ ಕಳ್ಳ ಸಾಗಾಣಿಕೆ ಮಾಡಲಾಗುತ್ತಿತ್ತು. ಶ್ರೀಲಂಕಾದ 38 ಕಳ್ಳ ಸಾಗಾಣಿಕೆಯ ಪ್ರಜೆಗಳಿಗೂ ತಲಾ 3.5 ರಿಂದ 10 ಲಕ್ಷ ರೂ. ಕೊಡುವುದಾಗಿ ತಿಳಿಸಿದ್ದರು. ಒಟ್ಟು 1.83 ಕೋಟಿ ರೂ. ಅನ್ನು ಶ್ರೀಲಂಕಾದ ರೂಪಾಯಿ ಹಾಗೂ ಭಾರತದ ರೂಪಾಯಿಯಲ್ಲಿ ಕೊಡುವುದಾಗಿ ಭರವಸೆ ನೀಡಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.