ಬೆಂಗಳೂರು: ನಮ್ಮ ಮೆಟ್ರೊ ದರ ಏರಿಕೆ ಬಗ್ಗೆ ನಿನ್ನೆ ಸಿಎಂ ಸಿದ್ದರಾಮಯ್ಯ ಮಾಡಿದ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರೊಬ್ಬರು ಟಿಕೆಟ್ ದರ ಇಳಿಕೆಗೂ ಪ್ರಸ್ತಾವನೆ ಸಲ್ಲಿಸಲು ಏನು ಪ್ರಾಬ್ಲಂ ಎಂದು ಪ್ರಶ್ನಿಸಿದ್ದಾರೆ.
ಮೆಟ್ರೊ ದರ ಏರಿಕೆಗೆ ಯಾರು ಕಾರಣ ಎಂಬ ಬಗ್ಗೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವೆ ಆರೋಪ-ಪ್ರತ್ಯಾರೋಪ ನಡೆಯುತ್ತಲೇ ಇದೆ. ಬಿಜೆಪಿ ಸಂಸದರು ರಾಜ್ಯ ಸರ್ಕಾರದತ್ತ ಬೊಟ್ಟು ಮಾಡುತ್ತಿದ್ದರೆ, ರಾಜ್ಯ ಸರ್ಕಾರ ಕೇಂದ್ರ ಸರ್ಕಾರವೇ ಬೆಲೆ ಏರಿಕೆಗೆ ಕಾರಣ ಎನ್ನುತ್ತಿದೆ.
ಈ ನಡುವೆ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಟ್ವೀಟ್ ಮಾಡಿ ಮೆಟ್ರೊ ದರ ಏರಿಕೆಗೆ ಕೇಂದ್ರ ಸರ್ಕಾರವೇ ಕಾರಣ ಎಂದಿದ್ದಾರೆ. ಮೆಟ್ರೊ ದರ ನಿಗದಿ ಮಾಡುವುದು ಕೇಂದ್ರ ಸರ್ಕಾರ ನೇಮಿಸಿದ ಸಮಿತಿ. ಮೆಟ್ರೊ ಸ್ವಾಯತ್ತ ಸಂಸ್ಥೆಯಾದರೂ ಇದರಲ್ಲಿ ಕೇಂದ್ರ ಮತ್ತು ರಾಜ್ಯದ ಪ್ರತಿನಿಧಿಗಳಿರುತ್ತಾರೆ. ಬೆಲೆ ನಿಗದಿ ಮಾಡಲು ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸುತ್ತದೆ. ಬೆಲೆ ನಿಗದಿ ಮಾಡುವ ಸಮಿತಿಯ ಅಧ್ಯಕ್ಷರನ್ನು ಕೇಂದ್ರ ನೇಮಿಸುತ್ತದೆ ಎಂದಿದ್ದರು.
ಅವರ ಈ ಟ್ವೀಟ್ ಗೆ ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದು ಹಾಗಿದ್ದರೆ ನೀವು ಈಗ ಬೆಲೆ ಇಳಿಕೆಗೂ ಪ್ರಸ್ತಾವನೆ ಇಡಿ. ಬೆಲೆ ಇಳಿಸಲು ಪ್ರಸ್ತಾವನೆ ಸಲ್ಲಿಸಲು ನಿಮಗೆ ಏನು ಪ್ರಾಬ್ಲಂ. ಕೇಂದ್ರಕ್ಕೆ ಜನರೇ ಬುದ್ಧಿ ಕಲಿಸುತ್ತಾರೆ. ಸುಮ್ಮನೇ ಗೂಬೆ ಕೂರಿಸಬೇಡಿ ಎಂದಿದ್ದಾರೆ.