Publish Date: Sun, 30 Jan 2022 (20:39 IST)
Updated Date: Sun, 30 Jan 2022 (20:43 IST)
15ಕ್ಕೂ ಹೆಚ್ಚು ಸಚಿವರು ಬಿಜೆಪಿ ಶಾಸಕರ ಅಹವಾಲುಗಳಿಗೆ ಸ್ಪಂದಿಸುತ್ತಿಲ್ಲ. ಶಾಸಕರ ದೂರವಾಣಿ ಕರೆಗಳನ್ನೂ ಸ್ವೀಕರಿಸುವುದಿಲ್ಲ ಎಂದು ದೂರಿ ಹೊನ್ನಾಳಿ ಬಿಜೆಪಿ ಶಾಸಕ ಎಂ. ಪಿ. ರೇಣುಕಾಚಾರ್ಯ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ದೂರು ಸಲ್ಲಿಸಿದ್ದಾರೆ.
ಹೌದು, ಸಿಎಂ ಬೊಮ್ಮಾಯಿ ಮತ್ತು ಕಟೀಲ್ ಅವರನ್ನು ಭೇಟಿ ಮಾಡಿ ಲಿಖಿತ ದೂರು ಸಲ್ಲಿಸಿರುವ ರೇಣುಕಾಚಾರ್ಯ, ಕೆಲವು ಸಚಿವರು ತಮ್ಮಿಂದಲೇ ಈ ಸರ್ಕಾರ ಬಂದಿದೆ ಎಂಬ ದುರಹಂಕಾರದ ವರ್ತನೆ ಪ್ರದರ್ಶಿಸುತ್ತಿದ್ದು, ಖುದ್ದಾಗಿ ಭೇಟಿಮಾಡಿ ಪತ್ರಗಳನ್ನು ನೀಡಿದರೆ, ಆಪ್ತ ಸಹಾಯಕರಿಂದ ಸಹಿ ಮಾಡಿಸಿ ಅಧಿಕಾರಿಗಳಿಗೆ ನೀಡುತ್ತಾರೆ.
ಇನ್ನು, ಸಚಿವರ ಆಪ್ತ ಕಾರ್ಯದರ್ಶಿಗಳೂ ದೂರವಾಣಿ ಕರೆ ಸ್ವೀಕರಿಸುವುದಿಲ್ಲ. ಅಂತಹ ಸಚಿವರಿಗೆ ತಿಳಿ ಹೇಳಿ, ಪಕ್ಷದ ಶಾಸಕರಿಗೆ ಸ್ಪಂದಿಸುವಂತೆ ತಾಕೀತು ಮಾಡಬೇಕು ಎಂದು ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.