Publish Date: Sat, 01 Dec 2018 (10:29 IST)
Updated Date: Sat, 01 Dec 2018 (10:31 IST)
ಬೆಂಗಳೂರು: ನಿನ್ನೆ ಸಿಎಂ ಕುಮಾರಸ್ವಾಮಿ ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ಅಲ್ಲಿ ವಸತಿ ಸಮುಚ್ಚಯವೊಂದನ್ನು ಉದ್ಘಾಟಿಸುವ ಕಾರ್ಯಕ್ರಮವಿತ್ತು. ಈ ವೇಳೆ ಅಲ್ಲಿಗೆ ಬಂದಿದ್ದ ಎಂಎಲ್ ಸಿ ಮರಿತಿಬ್ಬೇಗೌಡ ಪಿಎಸ್ಐ ಒಬ್ಬರ ಮೇಲೆ ಆವಾಜ್ ಹಾಕಿದ ಘಟನೆ ನಡೆದಿದೆ.
ಸಿಎಂ ಕಾರ್ಯಕ್ರಮಕ್ಕೆ ಕೊಂಚ ತಡವಾಗಿ ಆಗಮಿಸಿದ ಎಂಎಲ್ ಸಿ ಮರಿತಿಬ್ಬೇಗೌಡರ ಕಾರನ್ನು ಭದ್ರತೆ ಹೊಣೆ ಹೊತ್ತಿದ್ದ ಪಿಎಸ್ಐ ಬಸವರಾಜು ನೇತೃತ್ವದ ತಂಡ ತಡೆಹಿಡಿಯಿತು. ಇದರಿಂದ ಕೆಂಡಾಮಂಡಲರಾದ ಶಾಸಕರು ನಾನು ಯಾರೂಂತ ಗೊತ್ತಿಲ್ವಾ ನಿಂಗೆ? ತೋರಿಸ್ಲಾ ನಾನು ಯಾರೂಂತ. ಎಸ್ ಪಿ, ಐಜಿ ಈಗಲೇ ಇಲ್ಲಿಗೆ ಬರಲಿ. ಈವತ್ತು ಇಲ್ಲಿ ಇತಿಹಾಸ ಆಗ್ಬೇಕು. ನಿನ್ನ ಸಸ್ಪೆಂಡ್ ಮಾಡಿಸ್ತೀನಿ ಎಂದು ಕೂಗಾಡಿದರು.
ಈ ವೇಳೆಗೆ ಅಲ್ಲಿಗೆ ಬಂದ ಸಚಿವ ಸಾ ರಾ ಮಹೇಶ್ ಮರಿತಿಬ್ಬೇಗೌಡರನ್ನು ಸಮಾಧಾನಿಸಿ ವೇದಿಕೆಗೆ ಕರೆದೊಯ್ಯಲು ಯತ್ನಿಸಿದರು. ಆಗಲೂ ಸಮಾಧಾನಗೊಳ್ಳದ ಶಾಸಕರು ಪಿಎಸ್ಐ ಅಮಾನತಿಗೆ ಪಟ್ಟು ಹಿಡಿದಿದ್ದರು.
ಈ ಬಗ್ಗೆ ಖಾಸಗಿ ವಾಹಿನಿಯೊಂದಕ್ಕೆ ಪ್ರತಿಕ್ರಿಯಿಸಿರುವ ಎಂಎಲ್ ಸಿ ಮರಿತಿಬ್ಬೇಗೌಡ, ನಾನು ಎಂಎಲ್ ಸಿ, ಕಾರ್ಯಕ್ರಮಕ್ಕೆ ಹೋಗಬೇಕು ಎಂದು ಎಷ್ಟೇ ಹೇಳಿದರೂ ಆ ಅಧಿಕಾರಿ ಕೇಳಲಿಲ್ಲ. ಅರ್ಧಗಂಟೆ ಕಾಯಿಸಿದರು. ಅದಕ್ಕೆ ನಾನು ನಿಮ್ಮ ಮೇಲಧಿಕಾರಿಗಳ ನಂಬರ್ ಕೊಡಿ ಎಂದು ಕೇಳಿದೆ ಅಷ್ಟೇ. ಯಾರಿಗೂ ನಾನು ಆವಾಜ್ ಹಾಕಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ