Publish Date: Tue, 12 Feb 2019 (14:18 IST)
Updated Date: Tue, 12 Feb 2019 (14:19 IST)
ಸಚಿವ ಹೆಚ್.ಡಿ.ರೇವಣ್ಣ ಸತ್ಯಹರಿಶ್ಚಂದ್ರರೇ?... ಅವರು ಕೂಡಲೇ ಕ್ಷಮೆ ಕೇಳಬೇಕು. ಇಲ್ಲದಿದ್ದಲ್ಲಿ ಅವರು ಮಾಡಿರುವ ಎಲ್ಲಾ ಹಗರಣಗಳನ್ನು ಬಯಲಿಗೆ ಹಾಕುತ್ತೇನೆ. ಹೀಗಂತ ಬಿಜೆಪಿ ಶಾಸಕ ಎಚ್ಚರಿಸಿದ್ದಾರೆ.
ಸಚಿವ ಹೆಚ್.ಡಿ.ರೇವಣ್ಣ ವಿರುದ್ಧ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಗರಂ ಆಗಿದ್ದಾರೆ. ತಮ್ಮನ್ನು 420 ಎಂದು ಟೀಕಿಸಿದ್ದ ಸಚಿವ ರೇವಣ್ಣ ಅವರ ವಿರುದ್ಧ ಹರಿಹಾಯ್ದಿರುವ ರೇಣುಕಾಚಾರ್ಯ, ರೇವಣ್ಣ ವಯಸ್ಸಿನಿಂದ ಹಿರಿಯರಿದ್ದು, ಅವರಿಂದ ಈ ರೀತಿಯ ಮಾತುಗಳನ್ನು ನಿರೀಕ್ಷೆ ಮಾಡಿರಲಿಲ್ಲ ಎಂದಿದ್ದಾರೆ. ತಮ್ಮ ವಿರುದ್ಧ ಕೀಳುಮಟ್ಟದ ಟೀಕೆ ಮಾಡಿರುವ ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಅವರು ಸತ್ಯಹರಿಶ್ಚಂದ್ರರೇ? ಎಂದು ಪ್ರಶ್ನಿಸಿದ ಅವರು, ರೇವಣ್ಣ ಅವರ ವಿರುದ್ಧ ಟೀಕೆ ಮಾಡಲು ತಮಗೂ ಪದಗಳು ಬರುತ್ತವೆ, ಆದರೆ ಅವರ ಮಟ್ಟಕ್ಕೆ ಇಳಿದು ಮಾತನಾಡುವುದಿಲ್ಲ ಎಂದರು.
ಆಡಿರುವ ಮಾತುಗಳಿಗೆ ರೇವಣ್ಣ ಕೂಡಲೇ ಕ್ಷಮೆ ಕೇಳಬೇಕು. ರೇವಣ್ಣ ತಮ್ಮ ಸ್ವಾಭಿಮಾನವನ್ನು ಕೆಣಕಿದ್ದಾರೆ. ಅವರೇನು ಹರಿಶ್ಚಂದ್ರರೇ, ಕ್ಷಮೆ ಕೇಳದಿದ್ದಲ್ಲಿ, ಅವರು ಮಾಡಿರುವ ಎಲ್ಲಾ ಹಗರಣಗಳನ್ನು ಬಯಲಿಗೆಳೆಯುವುದಾಗಿ ಎಚ್ಚರಿಕೆ ನೀಡಿದ್ದಾರೆ.