Publish Date: Sat, 04 Jul 2026 (14:09 IST)
Updated Date: Sat, 04 Jul 2026 (14:13 IST)
ಬೆಂಗಳೂರು: ಕೋಟ್ಯಾಂತರ ರೂಪಾಯಿ ವ್ಯಯಿಸಿ ವೈಟ್ ಟಾಪಿಂಗ್ ಮಾಡಿದ ರಸ್ತೆಯಲ್ಲಿ ದನ ಕಟ್ಟಿ ಗಲೀಜು ಮಾಡಿದ್ದಕ್ಕೆ ಮಾಲಿಕರನ್ನು ಸಾರ್ವಜನಿಕವಾಗಿಯೇ ಶಾಸಕ ರವಿ ಸುಬ್ರಹ್ಮಣ್ಯ ತರಾಟೆಗೆ ತೆಗೆದುಕೊಂಡ ವಿಡಿಯೋ ವೈರಲ್ ಆಗಿದೆ. ಕೋಟಿ ರೂ ಖರ್ಚು ಮಾಡಿದ್ದು ದನ ಸಾಕಕ್ಕಾ... ಶಾಸಕ ರವಿ ಸುಬ್ರಹ್ಮಣ್ಯ ರೋಷಾವೇಷ ತೋರಿದ್ದಾರೆ.
ಬೆಂಗಳೂರಿನ ರಸ್ತೆಗಳು ಮತ್ತು ಫುಟ್ಪಾತ್ಗಳ ಮೇಲಿನ ಅತಿಕ್ರಮಣದ ವಿರುದ್ಧ ಬಸವನಗುಡಿ ವಿಧಾನಸಭಾ ಕ್ಷೇತ್ರದ ಶಾಸಕ ಎಲ್. ಎ. ರವಿ ಸುಬ್ರಹ್ಮಣ್ಯ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಹೊಸದಾಗಿ ನಿರ್ಮಿಸಲಾದ ವೈಟ್ ಟಾಪಿಂಗ್ ರಸ್ತೆ ಮತ್ತು ಫುಟ್ಪಾತ್ಗಳ ಮೇಲೆ ಜಾನುವಾರುಗಳನ್ನು ಕಟ್ಟಿ ಹಾಕಿ, ಸಗಣಿ ಹಾಗೂ ಮೇವು ಹಾಕಿ ಗಲೀಜು ಮಾಡಿರುವುದನ್ನು ಕಂಡು ಶಾಸಕರು ಸ್ಥಳದಲ್ಲೇ ಸಾರ್ವಜನಿಕರ ವಿರುದ್ಧ ಕಿಡಿಕಾರಿದ್ದಾರೆ.
ಕ್ಷೇತ್ರದ ರಸ್ತೆ ವೀಕ್ಷಣೆ ಮತ್ತು ತಪಾಸಣೆ ನಡೆಸುತ್ತಿದ್ದ ವೇಳೆ ಶಾಸಕ ರವಿ ಸುಬ್ರಹ್ಮಣ್ಯ ಅವರಿಗೆ ಈ ದೃಶ್ಯ ಕಂಡುಬಂದಿದೆ. ಸಾರ್ವಜನಿಕರು ನಡೆದಾಡಬೇಕಾದ ಫುಟ್ಪಾತ್ಗಳನ್ನು ಹಸು, ಎಮ್ಮೆಗಳನ್ನು ಕಟ್ಟಲು ಬಳಸಲಾಗುತ್ತಿತ್ತು. ಅಷ್ಟೇ ಅಲ್ಲದೆ, ಹೊಸದಾಗಿ ನಿರ್ಮಿಸಲಾದ ಕಾಂಕ್ರೀಟ್ ವೈಟ್ ಟಾಪಿಂಗ್ ರಸ್ತೆಯುದ್ದಕ್ಕೂ ದನದ ಸಗಣಿ ಮತ್ತು ಮೇವು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದರಿಂದ ರಸ್ತೆಯ ಅಂದ ಕೆಟ್ಟಿತ್ತು.
ರಸ್ತೆಯ ಅವ್ಯವಸ್ಥೆಯನ್ನು ಕಂಡು ತೀವ್ರ ಅಸಮಾಧಾನಗೊಂಡ ಶಾಸಕರು ಜಾನುವಾರುಗಳ ಮಾಲೀಕರನ್ನು ತರಾಟೆಗೆ ತೆಗೆದುಕೊಂಡರು. ರಸ್ತೆಯಲ್ಲೇ ದನದ ಮಾಲಿಕರನ್ನು ರೋಷಾವೇಷದಿಂದ ತರಾಟೆಗೆ ತೆಗೆದುಕೊಂಡಿದ್ದಾರೆ.
ಶಾಸಕರ ಖಡಕ್ ವಾರ್ನಿಂಗ್: "ಫುಟ್ಪಾತ್ಗಳು ಇರೋದು ಪಾದಚಾರಿಗಳು ನಡೆದಾಡಲು, ಜಾನುವಾರುಗಳನ್ನು ಕಟ್ಟಲು ಅಲ್ಲ. ಈ ರಸ್ತೆಗಳನ್ನು ನಿರ್ಮಿಸಲು ಕೋಟ್ಯಂತರ ರೂಪಾಯಿ ಸಾರ್ವಜನಿಕರ ತೆರಿಗೆ ಹಣವನ್ನು ಖರ್ಚು ಮಾಡಲಾಗಿದೆ. ನಿಮ್ಮ ಹಸುಗಳನ್ನು ನಿಮ್ಮ ಸ್ವಂತ ಆಸ್ತಿ ಅಥವಾ ಜಾಗದ ಒಳಗೆ ಇಟ್ಟುಕೊಳ್ಳಿ, ಸಾರ್ವಜನಿಕ ರಸ್ತೆಗಳನ್ನು ಹಾಳು ಮಾಡಬೇಡಿ" ಎಂದು ಕಟುವಾಗಿ ಎಚ್ಚರಿಕೆ ನೀಡಿದ್ದಾರೆ.
ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ: ರಸ್ತೆ ಮತ್ತು ಫುಟ್ಪಾತ್ಗಳನ್ನು ಅತಿಕ್ರಮಣ ಮಾಡುವ ಹಾಗೂ ರಸ್ತೆಯ ಮೇಲೆ ಕಸ, ಸಗಣಿ ಹಾಕಿ ಗಲೀಜು ಮಾಡುವ ಮಾಲೀಕರ ವಿರುದ್ಧ ತಕ್ಷಣವೇ ಭಾರಿ ಮೊತ್ತದ ದಂಡ ವಿಧಿಸುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸ್ಥಳದಲ್ಲೇ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ