ಬೆಂಗಳೂರು: ನಗರದಲ್ಲಿ ನಿನ್ನೆ ಸಂಜೆ ಕೈವಾರ ತಾತಯ್ಯ ಜಯಂತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಆದರೆ ಈ ಕಾರ್ಯಕ್ರಮ ರಾಜಕೀಯ ಜಿದ್ದಾಜಿದ್ದಿಯ ವೇದಿಕೆಯಾಯ್ತು. ಈಗ ಇರೋದು ಬಿಜೆಪಿಯಲ್ಲ, ಸಿದ್ದರಾಮಯ್ಯ ಸರ್ಕಾರ, ಕೂತ್ಕೊಳ್ರೀ ಸುಮ್ನೇ ಎಂದು ಶಾಸಕ ಪ್ರದೀಪ್ ಈಶ್ವರ್ ಆವಾಜ್ ಹಾಕಿದ ಘಟನೆ ನಡೆದಿದೆ.
ವೇದಿಕೆಯಲ್ಲಿ ಬಿಜೆಪಿ ಸಂಸದ ಪಿಸಿ ಮೋಹನ್ ಕೂಡಾ ಇದ್ದರು. ಇದು ಸರ್ಕಾರೀ ಕಾರ್ಯಕ್ರಮವಾಗಿತ್ತು. ಆದರೆ ರಾಜಕೀಯ ರಣರಂಗವಾಗಿದ್ದು ವಿಪರ್ಯಾಸ. ಮೊದಲು ತಮ್ಮ ಸರದಿ ಬಂದಾಗ ಮಾತನಾಡಲು ಆರಂಭಿಸಿದ ಪ್ರದೀಪ್ ಈಶ್ವರ್ ನನ್ನ ಎದೆಯಲ್ಲಿ ರಾಮನೂ ಇದ್ದಾನೆ, ಸಿದ್ದರಾಮಯ್ಯನೂ ಇದ್ದಾರೆ ಎಂದರು.
ಈ ವೇಳೆ ಮುಂಭಾಗದಲ್ಲಿ ಕೂತಿದ್ದ ಬಲಿಜ ಸಮುದಾಯದ ಪಿಕೆ ಸುರೇಶ್ ಎದ್ದು ನಿಂತು ದಿ ಗ್ರೇನ್ ಮರ್ಚೆಂಟ್ಸ್ ಕೋ ಆಪರೇಟಿವ್ ಬ್ಯಾಂಕ್ ಚುನಾವಣೆಗೆ ಪ್ರವರ್ಗ ಬಿ-ಯಲ್ಲಿ ನಾನು ಸ್ಪರ್ಧಿಸಿದ್ದೆ. ಅಲ್ಲಿ ನನಗೆ ಬೆಂಬಲ ನೀಡಿಲ್ಲ. ಬಲಿಜ ಸಮುದಾಯದಿಂದ ಬೇರೆ ವ್ಯಕ್ತಿಯನ್ನು ನಿಲ್ಲಿಸುತ್ತೀರಾ ಎಂದು ತಕರಾರು ತೆಗೆದಿದ್ದಾರೆ.
ಆಗ ಪ್ರದೀಪ್ ಈಶ್ವರ್, ನೀವು ಸಮುದಾಯವನ್ನು ವಿಭಜಿಸಲು ಬಂದಿದ್ದೀರಾ ಕೂತ್ಕೊಳ್ರೀ ಸುಮ್ನೇ ಎಂದರು. ಆದರೂ ಸುರೇಶ್ ಸುಮ್ಮನಾಗಲಿಲ್ಲ. ಆಗ ಮತ್ತಷ್ಟು ಕೋಪಗೊಂಡ ಪ್ರದೀಪ್ ಈಶ್ವರ್, ಬಾಯಿ ಮುಚ್ಚಿಕೊಂಡಿರಿ, ಈಗ ಇರೋದು ಬಿಜೆಪಿ ಸರ್ಕಾರವಲ್ಲ, ಕಾಂಗ್ರೆಸ್ ಸರ್ಕಾರ. ನೀವು ನಿಮ್ಮ ಪಕ್ಷದ ಗುಣಗಾನ ಮಾಡಿದ್ರೆ ನಾನೂ ನನ್ನ ಪಕ್ಷದ ಗುಣಗಾನ ಮಾಡಬೇಕಾಗುತ್ತದೆ. ಈಗ ಇರೋದು ಸಿದ್ದರಾಮಯ್ಯ ಸರ್ಕಾರ, ನಿಮ್ಮಪ್ಪಂದಲ್ಲ ಎಂದರು.
ಆಗ ಆಸನದಿಂದ ಎದ್ದು ಬಂದ ಬಿಜೆಪಿ ಸಂಸದ, ಇದು ಸಿದ್ದರಾಮಯ್ಯ ಸರ್ಕಾರದ ಕಾರ್ಯಕ್ರಮ ಎಂದರೆ ನಾವು ಬಿಜೆಪಿ ಸಂಸದರು ಇಲ್ಲಿ ಇರಬೇಕಾ ಎಂದು ಆಕ್ರೋಶದಿಂದಲೇ ಪ್ರಶ್ನೆ ಮಾಡಿದರು. ನಿರೂಪಕರು ಎಷ್ಟೇ ಸಮಾಧಾನಿಸಲು ಯತ್ನಿಸಿದರೂ ಇಬ್ಬರ ನಡುವೆ ಮಾತು ಮುಂದುವರಿದಿತ್ತು. ಕೊನೆಗೆ ಪ್ರದೀಪ್ ಈಶ್ವರ್ ನೀವೇ ಕಾರ್ಯಕ್ರಮ ಮಾಡಿಕೊಳ್ಳಿ ಎಂದು ಅಲ್ಲಿಂದ ಎದ್ದು ಹೋದರು.