Publish Date: Mon, 11 Aug 2025 (14:55 IST)
Updated Date: Mon, 11 Aug 2025 (14:57 IST)
ಬೆಂಗಳೂರು: ಇತ್ತೀಚೆಗೆಷ್ಟೇ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಏಳುತ್ತೆ ಎಂದು ಬಿರುಗಾಳಿ ಸೃಷ್ಟಿಸಿದ್ದ ಹಿರಿಯ ಸಚಿವ ಕೆಎನ್ ರಾಜಣ್ಣ ದಿಡೀರ್ ರಾಜೀನಾಮೆ ಸಲ್ಲಿಸಿದ್ದಾರೆ. ಇದಕ್ಕೆ ಕಾರಣ ಏನು ಎನ್ನುವುದು ಈಗ ಬಹಳ ಚರ್ಚೆಯಾಗುತ್ತಿದೆ.
ಸ್ವಪಕ್ಷದ ಬಗ್ಗೆಯೇ ನೇರ ನುಡಿಯಿಂದ ನಿಷ್ಠುರರಾಗಿದ್ದ ಕೆಎನ್ ರಾಜಣ್ಣ ರಾಜೀನಾಮೆ ಸಲ್ಲಿಸಿದ್ದಾರೆ. ಹೈಕಮಾಂಡ್ ಸೂಚನೆಯ ಹಿನ್ನಲೆಯಲ್ಲೇ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಕೇಳಿಬಂದಿದೆ.
ಮೊನ್ನೆಯಷ್ಟೇ ರಾಹುಲ್ ಗಾಂಧಿ ಮತಗಳ್ಳತನದ ವಿರುದ್ಧ ರಾಜ್ಯಕ್ಕೆ ಬಂದು ಬೃಹತ್ ಪ್ರತಿಭಟನೆ ನಡೆಸಿದ್ದರು. ಆದರೆ ಕೆಎನ್ ರಾಜಣ್ಣ ಮತಗಳ್ಳತನದ ಆರೋಪದ ವಿರುದ್ಧವೇ ಮಾತನಾಡಿದ್ದರು. ಇದರಿಂದ ಕಾಂಗ್ರೆಸ್ ಗೆ ಮುಜುಗರವಾಗಿತ್ತು.
ಒಂದೆಡೆ ರಾಹುಲ್ ಗಾಂಧಿ ಮತಗಳ್ಳತನವನ್ನೇ ಕೇಂದ್ರದ ವಿರುದ್ಧ ಅಸ್ತ್ರವಾಗಿಸಿ ದೊಡ್ಡ ಹೋರಾಟಕ್ಕೆ ಸಿದ್ಧವಾಗಿದ್ದರೆ ಇತ್ತ ರಾಜಣ್ಣ ಅವರ ವಿರುದ್ಧವೇ ಮಾತನಾಡಿದ್ದರು. ಇದರಿಂದ ಸಿಟ್ಟಿಗೆದ್ದ ಹೈಕಮಾಂಡ್ ರಾಜೀನಾಮೆ ನೀಡಲು ಸೂಚನೆ ನೀಡಿದೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಬಹಿರಂಗವಾಗಬೇಕಿದೆ.