ಬೆಂಗಳೂರು: ಬಿಜೆಪಿ ಮತ್ತು ಚುನಾವಣಾ ಆಯೋಗದ ವಿರುದ್ಧ ಮತಗಳ್ಳತನ ಆರೋಪ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ರಾಜ್ಯ ಬಿಜೆಪಿ ನಾಯಕ ಅರವಿಂದ ಲಿಂಬಾವಳಿ ಅಂಕಿ ಅಂಶದ ಸಮೇತ ತಿರುಗೇಟು ನೀಡಿದ್ದಾರೆ.
ಬಿಜೆಪಿಯವರು ಚುನಾವಣಾ ಆಯೋಗದ ಜೊತೆ ಸೇರಿ ಗೋಲ್ಮಾಲ್ ಮಾಡುತ್ತಿದ್ದಾರೆ ಎಂದು ರಾಹುಲ್ ಗಾಂಧಿಯವರು ಆರೋಪಿಸಿದ್ದಾರೆ. ಅಕ್ರಮ ಎಸಗುತ್ತಿದ್ದಾರೆ ಎಂದಿದ್ದಾರೆ. ಅದರಲ್ಲಿ ಮಹದೇವಪುರದ ಕುರಿತು ಪಿಪಿಟಿ ಪ್ರಸೆಂಟೇಷನ್ ಮಾಡಿದ್ದಾರೆ.
40,009 ನಕಲಿ ಮತ್ತು ಅಸಿಂಧು ಮತಗಳಿವೆ; ಒಂದೇ ವಿಳಾಸದ 10,452 ಬಲ್ಕ್ ಮತದಾರರು, ಫಾರ್ಮ್ 6ರ (ಹೊಸ ಮತದಾರ) ದುರ್ಬಳಕೆ-33692, ಡುಪ್ಲಿಕೇಟ್ ಮತದಾರರ ಸಂಖ್ಯೆ 11,965 ಇದೆ. 4132 ಅಸಮರ್ಪಕ ಫೋಟೊ ಇರುವ ಮತದಾರರಿದ್ದಾರೆ ಎಂಬ ಆರೋಪ ಮಾಡಿ 7 ಉದಾಹರಣೆ ಕೊಟ್ಟಿದ್ದಾರೆ. ಇದರ ರಿಯಾಲಿಟಿ ಚೆಕ್ ಮಾಡಿದ್ದೇವೆ. ಗುರುಕಿರೀಟ್ ಸಿಂಗ್ ಹೆಸರು 4 ಸಾರಿ ಮತದಾರರ ಪಟ್ಟಿಯಲ್ಲಿದೆ. ಅವರು ತಮ್ಮÀ ಹೆಸರು ಸೇರ್ಪಡೆಗೆ 4 ಬಾರಿ ಅರ್ಜಿ ಸಲ್ಲಿಸಿದಾಗ ತಿರಸ್ಕರಿಸಲ್ಪಟ್ಟಿತ್ತು. ಆದರೆ, ಮತದಾರರ ಪಟ್ಟಿಯಲ್ಲಿ ಬೇರೆಬೇರೆ ಕಡೆ ಕಾಣಿಸಿಕೊಂಡಿದೆ ಎಂದು ವಿವರ ನೀಡಿದರು. 3 ಕಡೆ ಹೆಸರು ರದ್ದತಿಗೆ ಕೋರಿದ್ದಾರೆ ಎಂದರು.
ಲಕ್ನೋದ ಆದಿತ್ಯ ಶ್ರೀವಾಸ್ತವ 19 ವರ್ಷ ಇದ್ದಾಗ ಲಕ್ನೋದಲ್ಲಿ ಹೆಸರು ಸೇರ್ಪಡೆಯಾಗಿದೆ. ಬಳಿಕ ಕೆಲಸದಲ್ಲಿದ್ದ ಮುಂಬೈನಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆ, ಬಳಿಕ ಬೆಂಗಳೂರಿನಲ್ಲಿ ಹೆಸರು ಸೇರಿಸಿ ಮತ ಚಲಾಯಿಸಿದ್ದಾರೆ. ಇವರು ಕೂಡ ಫಾರ್ಮ್ 7 ಮೂಲಕ ಬದಲಾವಣೆಗೆ ಅರ್ಜಿ ಕೊಟ್ಟವರು ಎಂದು ವಿವರಿಸಿದರು. ನಕಲಿ ವಿಳಾಸದ ಚೆಕ್ ಮಾಡಿದ್ದು, 13 ಜನ ಸಿಕ್ಕಿದ್ದಾರೆ. ಇವರು ವಿಳಾಸ ಕೊಟ್ಟರೂ ಸೇರಿಸಿಲ್ಲ ಎಂಬ ಮಾಹಿತಿ ಸಿಕ್ಕಿದೆ. ಬಲ್ಕ್ ಮತದಾರರ ಕುರಿತ ಆರೋಪ ಸರಿಯಲ್ಲ ಎಂದು ವಿಡಿಯೋ ಮೂಲಕ ಮಾಹಿತಿ ಕೊಟ್ಟರು. 2 ಕಡೆ ಮತ ಹಾಕಿದ್ದಾರೆ ಎಂದು ರಾಹುಲ್ ಆರೋಪಿಸಿದ್ದು, ಅವನ್ನೂ ತಪಾಸಣೆ ಮಾಡಿದ್ದೇವೆ. ಅವರು ಒಂದೇ ಕಡೆ ಮತ ಹಾಕಿದ್ದಾರೆ ಎಂಬ ವಿವರ ಲಭಿಸಿದ್ದಾಗಿ ತಿಳಿಸಿದರು.
2008ರಲ್ಲಿ ಮಹದೇವಪುರ ಹೊಸ ಕ್ಷೇತ್ರ ರಚನೆ ಆಗಿದೆ. ಹಳೆ ವರ್ತೂರು ಕ್ಷೇತ್ರ ಮಹದೇವಪುರ, ಕೆ.ಆರ್.ಪುರ, ಸಿವಿ ರಾಮನ್ ನಗರ- ಹೀಗೆ 3 ಕ್ಷೇತ್ರಗಳಾಗಿ ಪರಿವರ್ತನೆಗೊಂಡಿತು. ಅಲ್ಲಿಂದೀಚೆಗೆ 4 ಬಾರಿ ವಿಧಾನಸಭೆ- ಲೋಕಸಭಾ ಚುನಾವಣೆ ನಡೆದಿದೆ. 4 ಬಾರಿಯೂ ಬಿಜೆಪಿ ಗೆದ್ದಿದೆ ಎಂದು ವಿವರಿಸಿದರು. 2008ರಲ್ಲಿ 2,75,328 ಮತದಾರರಿದ್ದರು. 1,46,404 ಮತಗಳು ಚಲಾವಣೆಯಾಗಿದ್ದವು ಎಂದರು.
2009ರ ಲೋಕಸಭಾ ಚುನಾವಣೆಯಲ್ಲಿ 3,14,000 ಮತದಾರರಿದ್ದು, 1,50,080 ಜನರು ಮತ ಚಲಾಯಿಸಿದ್ದರು. 2013 ವಿಧಾನಸಭೆಯಲ್ಲಿ 3,68,210 ಜನರು ಮತದಾರರಾಗಿದ್ದರು. 2,26,749 ಜನರು ಮತ ಚಲಾಯಿಸಿದ್ದಾರೆ ಎಂದ ಅವರು, 2014 ಲೋಕಸಭೆ, 2018ರ ವಿಧಾನಸಭಾ ಚುನಾವu, 2019ರ ಲೋಕಸಭೆ ಚುನಾವಣೆÉ ಮತದಾನ ಕುರಿತು ಮಾಹಿತಿ ಹಂಚಿಕೊಂಡರು. 2023ರ ಅಸೆಂಬ್ಲಿಯಲ್ಲಿ 6,07,135 ಜನ ಮತದಾರರಿದ್ದು, 3,29,841 ಜನರು ಮತ ಚಲಾಯಿಸಿದ್ದರು. 2024ರ ಲೋಕಸಭಾ ಚುನಾವಣೆಯಲ್ಲಿ 6,59,733 ಮತದಾರರಿದ್ದರು. 3,51,535 ಜನರು ಮತ ಚಲಾಯಿಸಿದ್ದರು ಎಂದು ವಿವರಿಸಿದರು. ಈಗ 6,80,514 ಜನ ಮತದಾರರು ಮಹದೇವಪುರ ಕ್ಷೇತ್ರದಲ್ಲಿ ಇದ್ದಾರೆ ಎಂದರು.
ವಲಸೆ ಬರುವವರು ಹೆಚ್ಚಿದ್ದಾರೆ. ಹೀಗಾಗಿ ಮತದಾರರ ಸಂಖ್ಯೆ ಗಣನೀಯವಾಗಿ ಜಾಸ್ತಿ ಆಗುತ್ತದೆ. ಹೊರ ಹೋಗುವವರ ಸಂಖ್ಯೆಯೂ ಗಣನೀಯವಾಗಿದೆ. 3 ಬಾರಿ ಲೋಕಸಭೆ- 3 ಬಾರಿ ವಿಧಾನಸಭೆಗೆ ಬಿಜೆಪಿಗೆ 1 ಲಕ್ಷಕ್ಕಿಂತ ಹೆಚ್ಚು ಮತ ಬಂದಿದೆ ಎಂದು ಮಾಹಿತಿ ಕೊಟ್ಟರು. ಬಿಜೆಪಿ ಮತಪ್ರಮಾಣ ಹೆಚ್ಚುತ್ತ ಸಾಗಿದೆ ಎಂದು ವಿವರಿಸಿದರು. 2019ರ ಚುನಾವಣೆಯಲ್ಲೂ ಲೋಕಸಭೆಯಲ್ಲಿ ಪಿ.ಸಿ.ಮೋಹನ್ 69,974 ಮತಗಳ ಅಂತರದಿಂದ ಗೆದ್ದಿದ್ದರು. ಮಹದೇವಪುರದಲ್ಲಿ ನಾವು 72,559 ಲೀಡ್ ಕೊಟ್ಟಿದ್ದೆವು ಎಂದರು. ಈ ಸಾರಿ 1,14,046 ಮತಗಳ ಲೀಡ್ ಅನ್ನು ಮಹದೇವಪುರ ಕೊಟ್ಟಿದೆ. 32,707 ಮತಗಳ ಅಂತರದಿಂದ ಪಿ.ಸಿ.ಮೋಹನ್ ಅವರು ಗೆದ್ದಿದ್ದಾರೆ ಎಂದು ವಿವರ ನೀಡಿದರು.
ಮಾಧ್ಯಮಗಳಿಗೆ ತಪ್ಪು ಮಾಹಿತಿ ಕೊಟ್ಟ ರಾಹುಲ್ ಗಾಂಧಿ
ರಾಹುಲ್ ಗಾಂಧಿಯವರು ನಿನ್ನೆ ಮಾಧ್ಯಮದವರಿಗೆ ಒಂದು ತಪ್ಪು ಮಾಹಿತಿ ನೀಡಿದ್ದಾರೆ. 7 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುಂದಿತ್ತು; ಮಹದೇವಪುರದಲ್ಲಿ ಮಾತ್ರ ಬಿಜೆಪಿಗೆ ಅಧಿಕ ಲೀಡ್ ಲಭಿಸಿ ಗೆದ್ದಿದ್ದಾರೆ ಎಂದಿದ್ದಾರೆ. ಇದು ಸುಳ್ಳು. ಕಳೆದ ಲೋಕಸಭಾ ಚುನಾವಣೆಯಲ್ಲಿ 4 ವಿಧಾನಸಭಾ ಕ್ಷೇತ್ರಗಳಲ್ಲಿ ನಾವು ಮುಂದೆ ಇದ್ದೆವು. ರಾಜಾಜಿನಗರ, ಗಾಂಧಿನಗರ, ಸಿ.ವಿ.ರಾಮನ್ ನಗರ, ಮಹದೇವಪುರದಲ್ಲಿ ಬಿಜೆಪಿ ಲೀಡ್ ಪಡೆದಿತ್ತು ಎಂದು ಅರವಿಂದ ಲಿಂಬಾವಳಿ ಅವರು ತಿಳಿಸಿದರು. 4 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ ನಾವು 32,707 ಮತಗಳ ಅಂತರದಿಂದ ಗೆದ್ದಿದ್ದೇವೆ ಎಂದು ನುಡಿದರು.
ಮಹದೇವಪುರ ವೇಗವಾಗಿ ಬೆಳೆಯುತ್ತಿದೆ. ಈ ವಿಧಾನಸಭಾ ಕ್ಷೇತ್ರದಲ್ಲಿ 2016-17ರಲ್ಲಿ 1,48,743 ಪ್ರಾಪರ್ಟಿಗಳಿದ್ದು, 361 ಕೋಟಿ ತೆರಿಗೆ ಬಿಬಿಎಂಪಿಗೆ ಬಂದಿತ್ತು. 2024-25ರಲ್ಲಿ ಈಗ 3,59,468 ಪ್ರಾಪರ್ಟಿಗಳಿವೆ. 885 ಕೋಟಿ ತೆರಿಗೆ ಬಿಬಿಎಂಪಿಗೆ ಬಂದಿದೆ. ನನ್ನ ತೆರಿಗೆ ನನ್ನ ಹಕ್ಕು; ನನ್ನ ಕ್ಷೇತ್ರಕ್ಕೆ ನೀವೇನು ಕೊಟ್ಟಿದ್ದೀರಿ ಎಂದು ಸಿದ್ದರಾಮಯ್ಯನವರಿಗೆ ಯಾವುದಾದರೂ ಒಂದು ದಿನ ಕೇಳುತ್ತೇನೆ ಎಂದು ತಿಳಿಸಿದರು. ಪಂಚಾಯತ್ ವ್ಯಾಪ್ತಿ ಸೇರಿದರೆ 5 ಲಕ್ಷಕ್ಕಿಂತ ಹೆಚ್ಚು ಪ್ರಾಪರ್ಟಿ ಇರುವ ಕ್ಷೇತ್ರ ಇದು ಎಂದರು.
ಮಹದೇವಪುರ ಕ್ಷೇತ್ರದ ಉದಾಹರಣೆ ಕೊಟ್ಟು ಒಂದು ಲೋಕಸಭಾ ಕ್ಷೇತ್ರದಲ್ಲಿ ಮತಗಳ್ಳತನ ಆಗಿದೆ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ತಿಳಿಸಿದ್ದಾರೆ. ಹೀಗೆ ದೇಶದ 25 ಲೋಕಸಭಾ ಕ್ಷೇತ್ರಗಳಲ್ಲಿ ಮತಗಳ್ಳತನ ನಡೆದಿದೆ ಎಂದು ಮಹದೇವಪುರದಿಂದ ಶುರು ಮಾಡಿದ್ದಾರೆ. ನಿಮ್ಮನ್ನು ಉದ್ದೇಶಿಸಿ ಮಾತನಾಡಲು ಅವಕಾಶ ನೀಡಿದ್ದಕ್ಕಾಗಿ ಅವರ ಹೇಳಿಕೆಯನ್ನು ಸ್ವಾಗತಿಸಲೇ ಅಥವಾ ಅವರಿಗೆ ಜ್ಞಾನ ಕಡಿಮೆ ಇದೆಯೇ? ಏನು ಮಾತನಾಡಬೇಕು ಎಂದು ಅರ್ಥವಾಗುತ್ತಿಲ್ಲ ಎಂದು ತಿಳಿಸಿದರು.
ವರುಣಾದಲ್ಲೂ 00 ಮನೆ ನಂಬರ್
ವರುಣಾ ವಿಧಾನಸಭಾ ಕ್ಷೇತ್ರದ ಪಾರ್ಟ್ ನಂಬರ್ 8ರಲ್ಲಿ 00 ಮನೆ ನಂಬರ್ ಇರುವ ಕುರಿತಂತೆ ಅವರು ಮಾಹಿತಿ ತಿಳಿಸಿದರು. ಇದಕ್ಕೆ ದಾಖಲೆಗಳನ್ನು ನೀಡಿದರು. ಹಾಗಿದ್ದರೆ ಸಿದ್ದರಾಮಯ್ಯರೂ ನಕಲಿ ಅಲ್ಲವೇ? ಎಂದು ಅರವಿಂದ ಲಿಂಬಾವಳಿ ಅವರು ಪ್ರಶ್ನಿಸಿದರು. ಇದೊಂದು ಉದಾಹರಣೆ ಮಾತ್ರ. ನನಗೆ ರಾಹುಲ್ ಗಾಂಧಿ ಥರ ಆರು ತಿಂಗಳು ಸಿಕ್ಕಿಲ್ಲ; ಕೇವಲ 24 ಗಂಟೆಯಲ್ಲಿ ಇದೆಲ್ಲ ಸಿದ್ಧಪಡಿಸಿದ್ದೇನೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಕನಕಪುರದವರು ಹಾಗೆ ಮಾಡಿಲ್ಲ; ವಾಲ್ಮೀಕಿ ಹಗರಣದ ಮೂಲಕ ಗೆದ್ದ ಸಂಡೂರಿನಲ್ಲೂ ಹೀಗಾಗಿದೆ. ಪಾರ್ಟ್ ಸಂಖ್ಯೆ 6ರಲ್ಲಿ 0 ಇರುವ ಮನೆ ಸಂಖ್ಯೆಯ ಮತಗಳಿವೆ ಎಂದು ತಿಳಿಸಿದರು. ಮಾನ್ವಿಯಲ್ಲೂ ಪಾರ್ಟ್ 6ರಲ್ಲಿ ಹೀಗಿದೆ ಎಂದು ಉದಾಹರಣೆ ಕೊಟ್ಟರು. ಮಸ್ಕಿಯ ಪಾರ್ಟ್ ಸಂಖ್ಯೆ 1ರಲ್ಲಿ ಇದೇ ರೀತಿ ಇದೆ. ಇದು ಝೀರೊ ಕಥೆ ಎಂದರು.
ರಾಹುಲ್ ಗಾಂಧಿಯವರು ನಿನ್ನೆ ದೆಹಲಿಯಲ್ಲಿ ಮತ್ತು ಇವತ್ತು ಬೆಂಗಳೂರಿನಲ್ಲಿ ಬಿಜೆಪಿ ವಿರುದ್ಧ ಆಪಾದನೆಗಳನ್ನು ಮಾಡಿದ್ದಾರೆ. ಎಸ್.ಎಂ.ಕೃಷ್ಣ ಅವರು ರಾಹುಲ್ ಗಾಂಧಿಯವರ ಬಗ್ಗೆ ಮೈಂಡ್ ಫುಲ್ ಆಫ್ ಇಮ್ಮೆಚೂರಿಟಿ ಎಂದು ಒಂದು ಮಾತು ಹೇಳಿದ್ದರು. ರಾಹುಲ್ ಗಾಂಧಿಯವರ ಯೋಚನೆ ಸಂಪೂರ್ಣ ಅಪಕ್ವವಾಗಿದೆ ಎಂದಿದ್ದರು. ಅದನ್ನು ಮತ್ತೊಮ್ಮೆ ಪ್ರದರ್ಶಿಸಿದ್ದಾರೆ ಎಂದು ಟೀಕಿಸಿದರು.
ಚಾಮರಾಜಪೇಟೆ, ಶಿವಾಜಿನಗರದಲ್ಲೂ ಡಬಲ್ ಎಂಟ್ರಿ
ಚಾಮರಾಜಪೇಟೆಯಲ್ಲಿ ಪಾರ್ಟ್ ಸಂಖ್ಯೆ 45, ಪಾರ್ಟ್ ನಂಬರ್ 47ರಲ್ಲಿ ಆಯಿಷಾ ಬಾನು ಹೆಸರಿದೆ. ಇದು ನಕಲಿ ಮತದಾರರ- ಡಬಲ್ ಎಂಟ್ರಿ ವಿವರ ಎಂದರು. ಕಾಂಗ್ರೆಸ್ಸಿನವರು ಎರಡು ಕಡೆ ಮಾಡಿರುತ್ತಾರೆ ಎಂದು ತಿಳಿಸಿದರು. ಶಿವಾಜಿನಗರದ ಪಾರ್ಟ್ ನಂಬರ್ 169, ಪಾರ್ಟ್ ನಂಬರ್ 11ರಲ್ಲಿ ರೆಹಮತುಲ್ಲ ಹೆಸರಿದೆ ಎಂದು ಕ್ರಮಾಂಕದ ಜೊತೆಗೆ ವಿವರಿಸಿದರು. ಬಿಹಾರದಿಂದ ಚುನಾವಣಾ ಆಯೋಗವು ಕ್ಲೀನಿಂಗ್ ಶುರು ಮಾಡಿದೆ. ಅದು ಮುಂದುವರೆಯಲಿ ಎಂದು ಆಗ್ರಹಿಸಿದರು.