Publish Date: Fri, 01 Mar 2019 (09:40 IST)
Updated Date: Fri, 01 Mar 2019 (09:41 IST)
ಬೆಂಗಳೂರು: ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಕನ್ನಡ ಗಾಯಕಿ ಎಂಡಿ ಪಲ್ಲವಿ ಅವರ ಫೇಸ್ ಬುಕ್ ಪೋಸ್ಟ್ ಒಂದು ವಿವಾದಕ್ಕೀಡಾಗಿದೆ.
ಸರ್ಜಿಕಲ್ ಸ್ಟ್ರೈಕ್ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧದ ವಾತಾವರಣವಿದ್ದಾಗ ಯುದ್ಧೋತ್ಸಾಹ ಇದ್ದವರು ಅಲ್ಲಿಗೇ ಹೋಗಲಿ. ಒಮ್ಮೆ ವಿಂಗ್ ಕಮಾಂಡರ್ ಅಭಿನಂದನ್ ಜೈನ್ ಸ್ಥಾನದಲ್ಲಿ ತಮ್ಮನ್ನು ಕಲ್ಪಿಸಿಕೊಳ್ಳಲಿ. ಬಳಿಕ ಮಾತನಾಡಿ. ನಮಗೆ ಶಾಂತಿ ಬೇಕು ಎಂದು ಪಲ್ಲವಿ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದರು. ಇದಕ್ಕೆ ಬಲಪಂಥೀಯರು ಭಾರೀ ವಿರೋಧ ವ್ಯಕ್ತಪಡಿಸಿದ್ದರು.
ತಮ್ಮ ಮೊದಲಿನ ಪೋಸ್ಟ್ ಗೆ ಸ್ಪಷ್ಟನೆ ಹಾಕಿದ ಪಲ್ಲವಿ, ಮತ್ತೆ ವಿವಾದ ಮಾಡಿಕೊಂಡಿದ್ದಾರೆ. ಅಭಿನಂದನ್ ಅವರನ್ನು ಪಾಕ್ ಗೌರವಯುತವಾಗಿ ನಡೆಸಿಕೊಂಡಿದೆ. ನಾಳೆ ಬಿಡುಗಡೆ ಮಾಡುತ್ತಾರೆ. ನಾವು ಶಾಂತಿ ಬಯಸುತ್ತೇವೆ. ಇದುವೇ ನನ್ನ ಮೊದಲಿನ ಹೇಳಿಕೆಗೆ ಸ್ಪಷ್ಟನೆ ಎಂದು ಪಲ್ಲವಿ ಬರೆದುಕೊಂಡಿದ್ದರು. ಆದರೆ ಅಭಿನಂದನ್ ಅವರನ್ನು ಪಾಕ್ ಗೌರವಯುತವಾಗಿ ನಡೆಸಿಕೊಂಡಿದೆ ಎಂದು ಪಲ್ಲವಿ ಬರೆದಿದ್ದಕ್ಕೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾಕೆಂದರೆ ಅಭಿನಂದನ್ ಬಂಧಿಸಿದ ಕೂಡಲೇ ಪಾಕ್ ಅವರ ಮೇಲೆ ಹಲ್ಲೆ ನಡೆಸಿತ್ತು. ಇದು ಸ್ವತಃ ಪಾಕ್ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಸ್ಪಷ್ಟವಾಗಿತ್ತು. ಆದರೆ ಹಲ್ಲೆ ನಡೆಸಿದ್ದಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖಂಡನೆ ವ್ಯಕ್ತವಾಗುತ್ತಿದ್ದಂತೆ, ಇನ್ನೊಂದು ವಿಡಿಯೋ ಮಾಡಿದ್ದ ಪಾಕ್ ಅಭಿನಂದನ್ ಬಳಿ ತನ್ನನ್ನು ಗೌರವಯುತವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಹೇಳಿಸಿತ್ತು. ಹೀಗಾಗಿಯೇ ಪಲ್ಲವಿ ಬರೆದುಕೊಂಡ ಹೇಳಿಕೆ ಈಗ ವಿವಾದಕ್ಕೀಡಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.