Publish Date: Tue, 10 Mar 2020 (16:08 IST)
Updated Date: Tue, 10 Mar 2020 (16:11 IST)
ಲಕ್ಷಾಂತರ ಭಕ್ತರ ಆರಾಧ್ಯ ದೈವರಾಗಿದ್ದ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಯಾನಾಗುಂದಿಯ ಶ್ರೀ ಶ್ರೀ ಶ್ರೀ ರೂಪರಹಿತ ಅಹಿಂಸಾ ಯೋಗೀಶ್ವರ ವೀರಧರ್ಮಜ ಮಾತಾ ಮಾಣಿಕೇಶ್ವರಿ ಅವರ ಅಂತ್ಯಸಂಸ್ಕಾರವು ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿತು.
ಯಾನಾಗುಂದಿಯ ದೇವಸ್ಥಾನದ ಆವರಣದಲ್ಲಿ ಭಕ್ತ ಸಮೂಹದ ಸಾಗರದ ಮಧ್ಯೆ ಶೈವ ಧರ್ಮದ ಪ್ರಕಾರ ಶಾಸ್ತ್ರೋಕ್ತವಾಗಿ ನಡೆಯಿತು.
ನಾಡಿನ ಹರಗುರುಚರ ಮೂರ್ತಿಗಳ ಸಮ್ಮುಖದಲ್ಲಿ ಮತ್ತು ಶ್ರೀಶೈಲದ ಮಹಾಸ್ವಾಮೀಜಿಗಳ ನೇತೃತ್ವದಲ್ಲಿ ಅಂತ್ಯಸಂಸ್ಕಾರದ ವಿಧಿ-ವಿಧಾನಗಳು ನೆರವೇರಿಸಲಾಯಿತು. ಸೂರ್ಯನಂದಿ ಬೆಟ್ಟದ ವೀರ ಧರ್ಮಜ ವೀರವಿರಾಗಿಣಿ ಮಾತೆ ಮಾಣಿಕೇಶ್ವರಿ ಅವರನ್ನು ದೇವಸ್ಥಾನದ ಒಳಗಡೆ ಇರುವ ಶಿಲಾ ಮಂಟಪದ ನಾಗ ಸಿಂಹಾಸನ 12 ಅಡಿ ಆಳದ ಗುಹೆಯಲ್ಲಿರುವ 5 ಅಡಿ ಎತ್ತರದ ಶಿವಲಿಂಗದಲ್ಲಿ ಭಕ್ತರ ಪಾಲಿನ “ಅಮ್ಮ” ಲೀನರಾದರು.
ಅನ್ನ, ನೀರು ತ್ಯಜಿಸಿ ಧರ್ಮಕಾರ್ಯ, ತಪ್ಪಸ್ಸು ಮೂಲಕ ಮಹಾಯೋಗಿನಿ ಎನಿಸಿಕೊಂಡಿದ್ದ ಮಾತೆ ಮಾಣಿಕೇಶ್ವರಿಯವರು ಅನೇಕ ಪವಾಡಕ್ಕೆ ಕಾರಣರಾಗಿದ್ದವರು. ವರ್ಷದಲ್ಲಿ ಎರಡು ಬಾರಿ ಮಹಾಶಿವರಾತ್ರಿ ಮತ್ತು ಗುರು ಪೂರ್ಣಿಮೆಯಂದು ಮಾತ್ರ ಸಾರ್ವಜನಿಕ ದರ್ಶನ ನೀಡುತ್ತಿದ್ದ ಅವರು ಅಹಿಂಸೆ ಮತು ಪ್ರಾಣಿ ಬಲಿ ಮಾಡದಂತೆ ಭಕ್ತರಿಗೆ ಕರೆ ನೀಡುತ್ತಿದ್ದರು.