Publish Date: Sun, 08 Mar 2020 (13:00 IST)
Updated Date: Sun, 08 Mar 2020 (13:02 IST)
ದೇಶದ ಕೋಟ್ಯಾಂತರ ಭಕ್ತರ ಆರಾಧ್ಯ ದೈವ ಮಾತಾ ಮಾಣಿಕೇಶ್ವರಿ ಅಮ್ಮನವರು ಲಿಂಗೈಕ್ಯರಾಗಿದ್ದಾರೆ.
ಅಹಿಂಸೆಯೇ ಪರಮ ಧರ್ಮ ಎಂದು ಸಾರಿದ, ಕೋಟ್ಯಾಂತರ ಭಕ್ತರ ಆರಾಧ್ಯ ದೈವ ಮಾತಾ ಮಾಣಿಕೇಶ್ವರಿ ಅಮ್ಮನವರು ಶನಿವಾರ ರಾತ್ರಿ 8.27 ಗಂಟೆಗೆ ಇಹಲೋಕ ತ್ಯಜಿಸಿದ್ದಾರೆ.
ಯಾದಗಿರಿಯ ಯಾನಾಗುಂದಿಯ ಮಾಣಿಕ್ಯಗಿರಿಯಲ್ಲಿ ಸತತ 66 ವರ್ಷಗಳಿಂದ ಧ್ಯಾನಸ್ಥರಾಗಿದ್ದ ಮಾತಾ ಮಾಣೀಕೇಶ್ವರಿ ಅಮ್ಮನವರು ತಮ್ಮ 87ನೇ ವರ್ಷದ ಪಯಣ ಮುಗಿಸಿ ಕಣ್ಮರೆಯಾಗಿದ್ದಾರೆ.
ಮಾತಾ ಮಾಣಿಕೇಶ್ವರಿ ಅಮ್ಮನವರು 1933 ರಲ್ಲಿ ಸೇಡಂ ತಾಲೂಕಿನ ಮಲ್ಲಾಬಾದ ಎಂಬ ಗ್ರಾಮದಲ್ಲಿ ಜನಿಸಿ, ತಮ್ಮ 16 ನೇ ವಯಸ್ಸಿಗೆ ಯಾನಾಗುಂದಿಗೆ ಬಂದು ತಪಸ್ಸು, ಧ್ಯಾನದ ಮೂಲಕ ಅಧ್ಯಾತ್ಮ ಲೋಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಇತ್ತೀಚೆಗೆ ತೀರಾ ಅನಾರೋಗ್ಯಕ್ಕೆ ಈಡಾಗಿದ್ದ ಅವರನ್ನು ಚಿಕಿತ್ಸೆ ನೀಡಿ ಗುಣಪಡಿಸಲಾಗಿತ್ತು.
ತಮ್ಮ ಹುಟ್ಟು ದಿನ, ಮಹಾಶಿವರಾತ್ರಿಯಂದು ಲಕ್ಷಾಂತರ ಭಕ್ತರಿಗೆ ದರ್ಶನ ನೀಡುತ್ತಿದ್ದ ಮಾತಾ ಮಾಣಿಕೇಶ್ವರಿ ಕುರಿ, ಕೋಳಿ, ಹಸುಗಳನ್ನು ಕೊಲ್ಲದೆ ಅಹಿಂಸೆಯನ್ನು ಪ್ರತಿಪಾದಿಸುವಂತೆ ಸಂದೇಶ ಸಾರುತ್ತಿದ್ದರು. ಆಶ್ರಮಕ್ಕೆ ಬರುವ ಭಕ್ತರು ಅನ್ನಪ್ರಸಾದ ಸ್ವೀಕರಿಸುವುದಕ್ಕೂ ಮುಂಚೆ ಅಹಿಂಸೆಯ ತತ್ವ ಬೋಧನೆ ನಡೆಯುತ್ತಿತ್ತು.