ಬೆಂಗಳೂರು: ಪಹಲ್ಗಾಮ್ ಉಗ್ರ ದಾಳಿ ಬಳಿಕ ಪ್ರಧಾನಿ ಮೋದಿ ಬಿಹಾರದಲ್ಲಿ ಇಂಗ್ಲಿಷ್ ನಲ್ಲಿ ಭಾಷಣ ಮಾಡಿದ್ದನ್ನು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಲೇವಡಿ ಮಾಡಿದ್ದಾರೆ. ಮಾರಾಯಾ ನಿನ್ನ ಇಂಗ್ಲಿಷ್ ತಗೊಂಡು ನಾವೇನು ಮಾಡೋಣ, ಮೊದಲು ಭದ್ರತೆ ಕೊಡಿ ಎಂದಿದ್ದಾರೆ.
ಕೇಂದ್ರ ಸರ್ಕಾರದ ಬೆಲೆ ಏರಿಕೆ ಖಂಡಿಸಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಪಹಲ್ಗಾಮ್ ನಲ್ಲಿ ಉಗ್ರರು ದಾಳಿ ನಡೆಸಿದ ಬಳಿಕ ಸರ್ವ ಪಕ್ಷ ಸಭೆ ಕರೆಯಲಾಗಿತ್ತು. ಆದರೆ ಪ್ರಧಾನಿ ಮೋದಿ ಸಭೆಗೆ ಬರಲಿಲ್ಲ. ಪ್ರಧಾನಿ ಮೋದಿ ಬಿಹಾರದಲ್ಲಿ ಚುನಾವಣೆ ಭಾಷಣ ಮಾಡುತ್ತಿದ್ದರು. ಅರ್ಧ ಇಂಗ್ಲಿಷ್, ಅರ್ಧ ಹಿಂದಿಯಲ್ಲಿ ಭಾಷಣ ಮಾಡುತ್ತಿದ್ದರು. ಅರೇ ಇಂಗ್ಲಿಷ್ ನಲ್ಲಿ ಯಾಕೆ ಎಂದು ಕೇಳಿದ್ದಕ್ಕೆ ಇಡೀ ವಿಶ್ವಕ್ಕೇ ಮೋದಿ ಹೆದರಿಲ್ಲ ಎಂದು ತೋರಿಸಿಕೊಡಲು ಇಂಗ್ಲಿಷ್ ನಲ್ಲಿ ಭಾಷಣ ಮಾಡಿದ್ದಾಗಿ ಹೇಳಿದರು.
ಮಾರಾಯಾ.. ನಿನ್ನ ಇಂಗ್ಲಿಷ್ ಕಟ್ಕೊಂಡು ನಾವೇನು ಮಾಡೋಣ. ಮೊದಲು ದೇಶಕ್ಕೆ ಭದ್ರತೆ ಕೊಡು. ಗಡಿಭದ್ರತಾ ಪಡೆಗಳು, ಸೈನಿಕರು, ಪೊಲೀಸರು ಎಲ್ಲಾ ಇದ್ದೂ ಪಹಲ್ಗಾಮ್ ನಲ್ಲಿ ಭದ್ರತೆ ಕೊರತೆಯಿಂದ ದಾಳಿಯಾಯ್ತು.
ಮೊದಲು ದೇಶ. ಆ ಬಳಿಕವಷ್ಟೇ ನಿಮ್ಮ ಧರ್ಮ, ಪಾರ್ಟಿ, ಜಾತಿ ಎಲ್ಲಾ ಬರುತ್ತದೆ. ದೇಶಕ್ಕೆ ಭದ್ರತೆ ಕೊಡುವುದು ಮುಖ್ಯ ಎಂದು ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.