Publish Date: Thu, 11 Oct 2018 (18:41 IST)
Updated Date: Thu, 11 Oct 2018 (18:43 IST)
ಸುಪ್ರೀಂಕೋರ್ಟ್ ನ ಆದೇಶ ಬರುವವರೆಗೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಮಹಾಬಲೇಶ್ವರ ದೇವಾಲಯವು ರಾಜ್ಯ ಸರ್ಕಾರದ ಸುಪರ್ದಿಯಲ್ಲಿರಲಿದೆ.
ಸರಕಾರದ ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ (ಮುಜರಾಯಿ) ಬಿ.ಎಸ್.ನಾಗರತ್ನಮ್ಮ ಆದೇಶ ಹೊರಡಿಸಿದ್ದಾರೆ. ಈ ಆದೇಶದನ್ವಯ ದೇವಾಲಯವು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರ ಇಲ್ಲ. ಜಿಲ್ಲಾಧಿಕಾರಿ ನೇತೃತ್ವದ ಸಮಿತಿಗೂ ದೇವಾಲಯದಲ್ಲಿ ಯಾವುದೇ ಅಧಿಕಾರ ಇರುವುದಿಲ್ಲ.
ಆಡಳಿತಾಧಿಕಾರಿಯಾಗಿ ನೇಮಕಗೊಂಡ ಕೊಲ್ಲೂರು ದೇವಾಲಯದ ಆಡಳಿತಾಧಿಕಾರಿಯೂ ಆಗಿರುವ ಎಚ್.ಹಾಲಪ್ಪ, ದೇವಾಲಯದ ಆಡಳಿತವನ್ನು ನೋಡಿಕೊಳ್ಳಲಿದ್ದಾರೆ. ದೇವಸ್ಥಾನದಲ್ಲಿ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳುವಂತೆ ಸೆ.7ರಂದು ಸುಪ್ರೀಂಕೋರ್ಟ್ ಆದೇಶಿಸಿತ್ತು.
ಅದಕ್ಕೂ ಮುನ್ನ ದೇವಾಲಯದ ಆಡಳಿತಾಧಿಕಾರಿಯಾಗಿ ಹಾಲಪ್ಪ ಅವರು ಆ.30ರಂದು ಅಧಿಕಾರ ಸ್ವೀಕರಿಸಿದ್ದರು. ಹೀಗಾಗಿ, ಸುಪ್ರೀಂಕೋರ್ಟ್ ನ ಆದೇಶ ಬರುವವರೆಗೆ ಅವರೇ ಆಡಳಿತಾಧಿಕಾರಿಯಾಗಿ ಇರಲಿ ಎಂದು ನಾಗರತ್ನಮ್ಮ ಆದೇಶದಲ್ಲಿ ತಿಳಿಸಿದ್ದಾರೆ.