Publish Date: Tue, 18 Sep 2018 (09:01 IST)
Updated Date: Tue, 18 Sep 2018 (09:03 IST)
ಬೆಂಗಳೂರು: ಗಣೇಶ ಹಬ್ಬದ ಬಳಿಕ ಕೆಎಸ್ ಆರ್ ಟಿಸಿ ಮತ್ತು ಬಿಎಂಟಿಸಿ ಬಸ್ ಪ್ರಯಾಣ ದರವನ್ನು ಶೇ.18 ರಷ್ಟು ಹೆಚ್ಚಳ ಮಾಡಲು ಮೊದಲೇ ತೀರ್ಮಾನಿಸಿದಂತೆ ನಿನ್ನೆ ರಾತ್ರಿಯಿಂದ ಆದೇಶ ಜಾರಿಗೆ ತರಲಾಯಿತು. ಆದರೆ ಆದೇಶ ಹೊರಬಿದ್ದ ಕೆಲವೇ ಕ್ಷಣಗಳಲ್ಲಿ ಅದನ್ನು ಸಿಎಂ ಕುಮಾರಸ್ವಾಮಿ ತಡೆಹಿಡಿದಿದ್ದಾರೆ.
ತೈಲ ಬೆಲೆ ಹೆಚ್ಚಳ ಹಿನ್ನಲೆಯಲ್ಲಿ ನಷ್ಟ ಸರಿದೂಗಿಲು ಬಸ್ ದರ ಹೆಚ್ಚಳ ಅನಿವಾರ್ಯ ಎಂದು ಸಾರಿಗೆ ಸಚಿವ ತಮ್ಮಣ್ಣ ಸ್ಪಷ್ಟನೆ ನೀಡಿದ್ದರು. ಆದರೆ ನಿನ್ನೆ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ದರ ಕಡಿತಗೊಳಿಸಿ ಪ್ರತೀ ಲೀ.ಗೆ ತೈಲ ಬೆಲೆ 2 ರೂ. ಗಳಷ್ಟು ರಾಜ್ಯ ಸರ್ಕಾರ ಇಳಿಕೆ ಮಾಡಿತ್ತು.
ಇದರ ಬೆನ್ನಲ್ಲೇ ದರ ಏರಿಕೆ ಸದ್ಯಕ್ಕೆ ಬೇಡ. ಆದೇಶ ತಡೆಹಿಡಿಯಿರಿ ಎಂದು ಸಿಎಂ ಎಚ್ ಡಿಕೆ ಸಾರಿಗೆ ನಿಗಮದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈಗ ಪೆಟ್ರೋಲ್ ದರ ಇಳಿಕೆ ಮಾಡಿಯೂ ಬಸ್ ದರ ಹೆಚ್ಚಳ ಮಾಡಿದರೆ ವಿಪಕ್ಷ ಬಿಜೆಪಿ ಇದನ್ನೇ ಟೀಕಾಸ್ತ್ರವಾಗಿ ಬಳಸಬಹುದು ಎಂಬ ಕಾರಣಕ್ಕೆ ಸಿಎಂ ಈ ನಿರ್ಧಾರಕ್ಕೆ ಬಂದಿರಬಹುದು ಎಂದು ಊಹಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.