Publish Date: Sun, 17 Jul 2022 (14:04 IST)
Updated Date: Sun, 17 Jul 2022 (14:09 IST)
ಮಡಿಕೇರಿ- ಮಂಗಳೂರು ರಸ್ತೆಯಲ್ಲಿರುವ ಜಿಲ್ಲಾಧಿಕಾರಿ ಕಚೇರಿಯ ತಡೆಗೋಡೆಯ ಸ್ಲ್ಯಾಬ್ಗಳು ಹೊರಚಾಚಿದ್ದು, ಕಳಚಿ ಬೀಳುವ ಆತಂಕ ಮೂಡಿದೆ. ಹೀಗಾಗಿ, ವಾಹನ ಸಂಚಾರಕ್ಕೆ ಬದಲಿ ಮಾರ್ಗದ ವ್ಯವಸ್ಥೆ ಮಾಡಲಾಗಿದೆ.
ಮಡಿಕೇರಿಯಿಂದ ಮಂಗಳೂರಿಗೆ ಹೋಗುವವರು ಹಾಗೂ ಬರುವವರು ಮೇಕೇರಿ- ಅಪ್ಪಂಗಳ- ತಾಳತ್ತಮನೆ ಜಂಕ್ಷನ್ ಮಾರ್ಗದಲ್ಲಿ ಸಂಚರಿಸಬೇಕಿದೆ.
ಒಂದು ವಾರದಿಂದಲೂ ಸ್ಲ್ಯಾಬ್ಗಳು ಹೊರಚಾಚಿದ್ದವು. ತಡೆಗೋಡೆ ಕುಸಿದು ಬೀಳುವುದಿಲ್ಲ ಒಳಗೆ ನೀರು ಸೇರಿರುವುದರಿಂದ ಸ್ಲ್ಯಬ್ ಗಳು ಹೊರಚಾಚಿವೆ ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಪ್ರತಿಪಾದಿಸಿದ್ದರು.
ಸಚಿವ ಆರ್.ಅಶೋಕ್, ಸಂಸದ ಪ್ರತಾಪಸಿಂಹ, ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚುರಂಜನ್ ಪರಿಶೀಲನೆ ನಡೆಸಿ, ತಜ್ಞರಿಂದ ಪರಿಶೀಲನೆ ನಡೆಸಿ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಸೂಚಿಸಿದ್ದರು.
ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಡೆಗೋಡೆಗೆ ಪೈಪ್ ತೂರಿಸಿ ಮೋಟಾರ್ ಬಳಸಿ ನೀರನ್ನು ಹೊರತೆಗೆಯುವ ಪ್ರಯತ್ನವನ್ನೂ ನಡೆಸಿದ್ದರು. ಆದರೆ, ಸ್ಲ್ಯಾಬ್ ಗಳ ಹೊರಚಾಚುವಿಕೆ ಮುಂದುವರಿದಿರುವುದು ಆತಂಕಕ್ಕೆ ಕಾರಣವಾಗಿದೆ.