ಬೆಂಗಳೂರು: ಒಂದನೇ ತರಗತಿಗೆ 6 ವರ್ಷ ಕಡ್ಡಾಯ ಮಾಡಬೇಡಿ ಎಂದು ಮನವಿ ಮಾಡಲು ಬಂದ ಪೋಷಕರ ಮೇಲೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಗರಂ ಆದ ಘಟನೆ ನಡೆದಿದೆ.
ಪೋಷಕರ ಜೊತೆ ಅಲ್ಲಿ ಮಾಧ್ಯಮಗಳೂ ಇದ್ದಿದ್ದರಿಂದ ಮಧು ಬಂಗಾರಪ್ಪ ಸಿಟ್ಟಾದರು. ಮೀಡಿಯಾ ಮುಂದೆ ಮಾತನಾಡಬೇಕಾದರೆ ಅವರನ್ನೇ ಪರಿಹಾರ ಕೇಳಿ ಎಂದು ಗರಂ ಆಗಿ ಹೇಳಿ ತಮ್ಮ ಮನೆಯೊಳಗೆ ತೆರಳಿದ್ದಾರೆ.
ಕೆಲವು ಪೋಷಕರ ಗುಂಪು ಸಚಿವರನ್ನು ನೋಡಲು ಬಂದಿದ್ದರು. ಈ ವೇಳೆ ಅಲ್ಲಿ ಮಾಧ್ಯಮಗಳೂ ಇದ್ದಿದ್ದು ಸಚಿವರ ಆಕ್ರೋಶಕ್ಕೆ ಕಾರಣವಾಗಿದೆ. ಮೀಡಿಯಾದವರತ್ರ ಮಾತನಾಡುವುದಿದ್ದರೆ ಅವರ ಹತ್ರವೇ ಹೋಗಿ ಕೆಲಸ ಮಾಡಿಸಿಕೊಳ್ಳಿ. ನೀವೇ ಮಾಧ್ಯಮದವರನ್ನು ಕರೆದುಕೊಂಡು ಬಂದಿದ್ದೀರಿ ಎಂದು ಸಿಟ್ಟಾದರು.
ಮೀಡಿಯಾ ಮುಂದೆ ರಬ್ಬಿಶ್ ಮಾಡಿದ್ರೆ ಖಂಡಿತಾ ಕೊಡಲ್ಲ ಎಂದು ಸಿಟ್ಟಿಗೆದ್ದು ಸೀದಾ ಮನೆಯೊಳಗೆ ತೆರಳಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿರುವ ಪೋಷಕರು, ನಾವು ಮಾಧ್ಯಮದವರನ್ನು ಕರೆದುಕೊಂಡು ಬಂದಿರಲಿಲ್ಲ. ನಾವು ಸಚಿವರನ್ನು ಭೇಟಿ ಮಾಡಿ ಸಮಸ್ಯೆ ಹೇಳಲಷ್ಟೇ ಬಂದಿದ್ದೆವು ಎಂದಿದ್ದಾರೆ.