Publish Date: Thu, 26 May 2022 (08:26 IST)
Updated Date: Thu, 26 May 2022 (08:52 IST)
ಚಿಕ್ಕಬಳ್ಳಾಪುರ : ಗೃಹಿಣಿಯನ್ನು ಹತ್ಯೆ ಮಾಡಿ ಪರಾರಿಯಾಗಿದ್ದ ಪ್ರಿಯಕರನನ್ನು ದೊಡ್ಡಬೆಳವಂಗಲ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೇ 15 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ವಡಗೆರೆ ಗ್ರಾಮದಲ್ಲಿ ಭಾಗ್ಯಶ್ರೀ(35) ಅವರನ್ನು ಪ್ರಿಯಕರ ರಿಯಾಝ್ ಪಾಷಾ ಮನೆಯಿಂದ ಹೊರಗೆಳೆದು, ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿದ್ದ. ನಂತರ ಅಲ್ಲಿಂದ ಪರಾರಿಯಾಗಿದ್ದನು. ಪ್ರಕರಣದ ಜಾಡು ಹಿಡಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಮೃತ ಭಾಗ್ಯಶ್ರೀ ಪತಿ ಚನ್ನಬಸವರಾಜು ಸಂಬಂಧಿಕರ ಗೃಹ ಪ್ರವೇಶಕ್ಕೆ ತೆರಳಿದ್ದರು. ಈ ವೇಳೆ ಭಾಗ್ಯಶ್ರೀ ಮತ್ತು ಮಕ್ಕಳು ಮನೆಯಲ್ಲಿಯೇ ಇದ್ದರು.
ಸಮಯ ನೋಡಿಕೊಂಡು ರಿಯಾಝ್ ಪಾಷಾ, ಭಾಗ್ಯಶ್ರೀ ಮನೆಗೆ ನುಗ್ಗಿ, ಅವಳನ್ನು ಹೊರಗೆಳೆದಿದ್ದನು. ನಂತರ ಮಕ್ಕಳ ಮುಂದೆಯೇ ಭಾಗ್ಯಶ್ರೀಯನ್ನು ನಿರ್ದಯವಾಗಿ ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿ ಅಲ್ಲಿಂದ ಪರಾರಿಯಾಗಿದ್ದ.
ಈ ಕುರಿತಂತೆ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆಂ.ಗ್ರಾ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ಡಿವೈಎಸ್ಪಿ ನಾಗಾರಾಜ್, ಸರ್ಕಲ್ ಇನ್ಸ್ಪೆಕ್ಟರ್ ಹರೀಶ್ ಅವರ ಮಾರ್ಗದರ್ಶನದಲ್ಲಿ ದೊಡ್ಡಬೆಳವಂಗಲ ಸಬ್ ಇನ್ಸ್ಪೆಕ್ಟರ್ ಜ್ಞಾನಮೂರ್ತಿ ನೇತೃತ್ವದ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.