Publish Date: Thu, 06 Apr 2023 (19:15 IST)
Updated Date: Thu, 06 Apr 2023 (17:59 IST)
ನಟ ಸುದೀಪ್ಗೆ ಬೆದರಿಕೆ ಪತ್ರ ಪ್ರಕರಣದ ತನಿಖೆ ನಡೆಸುತ್ತಿರುವ CCB ಅಧಿಕಾರಿಗಳಿಗೆ ಮಹತ್ವದ ಮಾಹಿತಿ ಸಿಕ್ಕಿದೆ. ಜೊತೆಯಲ್ಲಿದ್ದವರೇ ಸುದೀಪ್ ವಿರುದ್ಧ ಕ್ರಿಮಿನಲ್ ಸಂಚು ರೂಪಿಸಿರುವ ಶಂಕೆ ವ್ಯಕ್ತವಾಗಿದೆ. ಅದಕ್ಕೆ ಪೂರಕವಾದ ಒಂದಿಷ್ಟು ಅಂಶಗಳು ತನಿಖೆಯಲ್ಲಿ ಬಯಲಾಗಿವೆ. ಪೊಲೀಸರ ಶಂಕೆ ಖಚಿತವಾದರೆ ಜೊತೆಯಲಿದ್ದವರಿಗೆ ಜೈಲು ಶಿಕ್ಷೆ ಖಚಿತವಾಗಲಿದೆ. ಈಗಾಗಲೇ ಸಿನಿರಂಗದವರ ಕೈವಾಡವಿದೆ ಅಂತ ಸುದೀಪ್ ನೇರವಾಗಿ ಆರೋಪ ಮಾಡಿದ್ದಾರೆ. ಸುದೀಪ್ ಜೊತೆಯಲ್ಲಿದ್ದವರನ್ನು ಸಿನಿರಂಗದ ವ್ಯಕ್ತಿಯೊಬ್ಬ ಬಳಸಿಕೊಂಡಿರುವ ಬಲವಾದ ಗುಮಾನಿ ಪೊಲೀಸರಿಗೆ ಇದೆ. ಶಂಕೆಗೆ ಕಾರಣವಾದ ಪೂರಕ ಹಾಗೂ ಸಾಂದರ್ಭಿಕ ಸಾಕ್ಷಿಗಳು ಪೊಲೀಸರಿಗೆ ಲಭ್ಯವಾಗಿದೆ. ಹೀಗಾಗಿ ಪುಟ್ಟೇನಹಳ್ಳಿ ಪೊಲೀಸರು ಹಾಗೂ ಸಿಸಿಬಿ ತಂಡ ಆ ವ್ಯಕ್ತಿಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ. ಆ ಪತ್ರದಲ್ಲಿರುವ ಕೆಲ ಅಂಶಗಳ ಆಧಾರ ಮೇಲೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಪತ್ರದಲ್ಲಿ ಆರ್.ಆರ್.ನಗರ, ಶೆರ್ಟಾನ್ ಹೊಟೇಲ್, ಪಂಜಾಬಿ ಹುಡುಗಿ ಎಂದೆಲ್ಲ ಉಲ್ಲೇಖಿಸಿದ್ದು, ಸುದೀಪ್ ಆಪ್ತ ಎನಿಸಿಕೊಂಡಿರುವ ವ್ಯಕ್ತಿಯಿಂದ ಅಥವಾ ಆತನನ್ನು ಬಳಸಿಕೊಂಡು ಬೆದರಿಕೆ ಹಾಕಿರುವ ಸಾಧ್ಯತೆ ಇದೆ.