Publish Date: Fri, 13 Jul 2018 (20:26 IST)
Updated Date: Fri, 13 Jul 2018 (20:33 IST)
ಬೈಕ್ ಕಳ್ಳತನ ಆರೋಪದ ಮೇಲೆ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಬಂಧಿತನಾಗಿದ್ದ ಆರೋಪಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಲಾಕಪ್ ಡೆತ್ ಎಂದು ಶಂಕಿಸಲಾಗಿದೆ. ಘಟನೆ ಸಂಬಂಧ ಮಂಡ್ಯ ಎಸ್ಪಿ ಇಬ್ಬರು ಪೇದೆಗಳನ್ನ ಅಮಾನತು ಮಾಡಿದ್ದು, ಸಾವಿಗೆ ಸೂಕ್ತ ನ್ಯಾಯ ದೊರಕಿಸಿಕೊಡಬೇಕೆಂದು ಪೋಷಕರು ಹಾಗೂ ವಿವಿಧ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿದ ಪರಿಣಾಮ, ಆರೋಪಿಯ ಶವ ಇನ್ನು ಕೂಡ ವಾರಸುದಾರರಿಗೆ ತಲುಪಿಲ್ಲ.
ಬೈಕ್ ಕಳ್ಳತನ ಮಾಡಿದ ಆರೋಪದ ಮೇಲೆ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಬೆಳ್ತೂರು ಗ್ರಾಮದ ಮೂರ್ತಿ, ಬಾಬು ಮತ್ತು ಅಂತರಹಳ್ಳಿ ಗ್ರಾಮದ ನಾಗರಾಜು ಎಂಬೋರನ್ನ ಕಳೆದ ಸೋಮವಾರ ಮಂಡ್ಯನಗರದ ಬಾರ್ ಒಂದರಲ್ಲಿ ಮಂಡ್ಯದ ಪಶ್ಚಿಮ ಠಾಣೆ ಪೊಲೀಸ್ರು ಬಂಧನ ಮಾಡಿದ್ದಾರೆ. ಈ ಪೈಕಿ ನಾಗರಾಜು ಎಂಬಾತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ರೆ, ಮತ್ತೊಬ್ಬ ಆರೋಪಿ ಬಾಬು ಎಂಬಾತನಿಗೆ ವಯಸ್ಸಾದ ಕಾರಣ ಆತನನ್ನು ಕೂಡ ಆರೋಪ ಸಾಬೀತಾಗದ ಹಿನ್ನಲೆಯಲ್ಲಿ ಬಿಡುಗಡೆ ಮಾಡಿದ್ದರು. ಆದರೆ ಮತ್ತೋರ್ವ ಆರೋಪಿ 40 ವರ್ಷದ ಮೂರ್ತಿ ಎಂಬಾತನನ್ನು ಠಾಣೆಯಲ್ಲಿಯೇ ಇರಿಸಲಾಗಿತ್ತು. ಆದ್ರೆ ಇಂದು ಬೆಳಿಗ್ಗೆ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಪೊಲೀಸ್ರು ಮೂರ್ತಿ ಸಂಬಂಧಿಗಳಿಗೆ ತಿಳಿಸಿದ್ದಾರೆ. ಮೂರ್ತಿ ಸಂಬಂಧಿಕರು ಮಾತ್ರ ಇದು ಆತ್ಮಹತ್ಯೆಯಲ್ಲ. ಲಾಕಪ್ ಡೆತ್ ಎಂದು ಆರೋಪ ಮಾಡ್ತಿದ್ದಾರೆ.
ಮದ್ದೂರು ತಾಲ್ಲೂಕಿನ ಬೆಳ್ತೂರು ಗ್ರಾಮದ ದಲಿತ ಸಮುದಾಯಕ್ಕೆ ಸೇರಿದ ಮೂರ್ತಿ ಮೂಲತಃ ಗಾರೆ ಕೆಲ್ಸ ಮಾಡಿಕೊಂಡು ಜೀವನ ನಡೆಸುತ್ತಿದ್ದು, ಈತನಿಗೆ ಇಬ್ಬರು ಪತ್ನಿಯರಿದ್ದಾರೆ. ಬೈಕ್ ಕಳ್ಳತನದ ಆರೋಪದ ಮೇಲೆ ಬಂಧಿತನಾಗಿದ್ದ, ಈತನ ಮೇಲೆ ಪೊಲೀಸ್ರು ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ ಎಂದು ಆರೋಪ ಮಾಡಿದ ಹಿನ್ನಲೆಯಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟರ್ ಜ್ಯೋತಿ ಪೊಲೀಸ್ ಠಾಣೆಗೆ ಬಂದು ಪರಿಶೀಲನೆ ನಡೆಸಿದ ಬಳಿಕವಷ್ಟೇ ಶವವನ್ನು ಮಂಡ್ಯ ಮಿಮ್ಸ್ ನ ಶವಾಗಾರಕ್ಕೆ ತರಲಾಯಿತು. ಶವಾಗಾರದ ಬಳಿ ಜಮಾಯಿಸಿದ ನೂರಾರು ಮಂದಿ ದಲಿತ ಸಂಘಟನೆಗಳ ಮುಖಂಡರು ಮಂಡ್ಯ ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.