Publish Date: Wed, 01 Apr 2020 (09:34 IST)
Updated Date: Wed, 01 Apr 2020 (09:36 IST)
ಬೆಂಗಳೂರು: ಲಾಕ್ ಡೌನ್ ವೇಳೆ ಜನರು ಅಗತ್ಯ ವಸ್ತುಗಳಿಗೆ ಪರದಾಡುವ ಸ್ಥಿತಿ ಬರಲ್ಲ ಎಂದು ಸರ್ಕಾರವೇನೋ ಹೇಳಿದೆ. ಆದರೆ ಆ ರೀತಿ ನಡೆಯುತ್ತಿಲ್ಲ ಎನ್ನುವುದು ವಿಪರ್ಯಾಸ.
ಸರಕು ಲಾರಿಗಳೂ ಸಾಗಾಟ ನಿಲ್ಲಿಸಿದ್ದು, ಮಾರುಕಟ್ಟೆಗಳೂ ಬಂದ್ ಆಗಿವೆ. ಹೀಗಾಗಿ ಬೇಕಾದಂತಹ ಎಲ್ಲಾ ದಿನಸಿ ವಸ್ತುಗಳು ಅಂಗಡಿಗೆ ಬರುತ್ತಿಲ್ಲ. ಅಲ್ಲದೆ ಪ್ರಮಾಣವೂ ಕಡಿಮೆಯಾಗಿರುವುದರಿಂದ ಎಲ್ಲಾ ಅಂಗಡಿಗಳಲ್ಲೂ ಮೊದಲಿನಂತೆ ವಸ್ತುಗಳು ಲಭ್ಯವಿಲ್ಲ. ಹೀಗಾಗಿ ಜನ ಪರದಾಡಬೇಕಾಗುತ್ತಿದೆ.
ಇನ್ನು, ಎಟಿಎಂಗಳಲ್ಲೂ ಕಾಲ ಕಾಲಕ್ಕೆ ಹಣ ತುಂಬುವ ಕೆಲಸವಾಗುತ್ತಿಲ್ಲ. ಹೀಗಾಗಿ ಬೆಂಗಳೂರಿನಂತಹ ನಗರ ಪ್ರದೇಶದ ಕೆಲವು ಎಟಿಎಂಗಳಲ್ಲೇ ಹಣ ಖಾಲಿಯಾಗಿದೆ. ಇದರಿಂದಾಗಿ ದುಡ್ಡೂ ಇಲ್ಲ, ದಿನಸಿಯೂ ಇಲ್ಲ ಎಂದು ಜನರು ಪರದಾಡುವಂತಾಗಿದೆ. ಜತೆಗೆ ಕೊರೋನಾ ಭಯದಿಂದಾಗಿ ಖಾಸಗಿ ವೈದ್ಯರು ತಮ್ಮ ಕ್ಲಿನಿಕ್ ಗಳನ್ನೂ ತೆರೆಯುತ್ತಿಲ್ಲ. ಕೆಲವು ಆಸ್ಪತ್ರೆಗಳು ಈಗ ಬರೋದೇ ಬೇಡ ಎಂದು ಬೋರ್ಡ್ ಹಾಕಿ ಕುಳಿತಿದ್ದಾರೆ. ಇದರಿಂದಾಗಿ ಕೊರೋನಾ ಹೊರತಾದ ಇತರ ರೋಗಿಗಳ ಪಾಡು ಕೇಳುವವರಿಲ್ಲದಾಗಿದೆ. ಹೀಗಾಗಿಯೇ ಜನರಿಗೆ ಲಾಕ್ ಡೌನ್ ಈಗೀಗ ಉಸಿರುಗಟ್ಟಿಸುವಂತೆ ಮಾಡುತ್ತಿದೆ. ಆದರೂ ಜೀವ ಉಳಿಸಿಕೊಳ್ಳಲು ಮನೆಯಲ್ಲೇ ಕೂರುವ ಪರಿಸ್ಥಿತಿ ಎದುರಾಗಿದೆ.