Publish Date: Tue, 23 Aug 2022 (14:47 IST)
Updated Date: Tue, 23 Aug 2022 (15:16 IST)
ಬೆಂಗಳೂರು : ಆಗಸ್ಟ್ 26ಕ್ಕೆ ಕರೆ ನೀಡಿದ್ದ ಮಡಿಕೇರಿ ಚಲೋ ನಡೆಸುವುದಿಲ್ಲ. ವಿರೋಧ ಪಕ್ಷದ ನಾಯಕನಾಗಿ ನಾನು ಕಾನೂನು ಉಲ್ಲಂಘನೆ ಮಾಡಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ತಮ್ಮ ಕಾರಿಗೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಡಿಕೇರಿ ಚಲೋ ಮಾಡಲು ಜಿಲ್ಲಾಧಿಕಾರಿ, ಎಸ್ಪಿ ಅನುಮತಿ ಕೊಟ್ಟಿಲ್ಲ.
ಈ ಸಂಬಂಧ ಪಕ್ಷದ ಶಾಸಕರು, ಅಧ್ಯಕ್ಷರ ಜೊತೆ ಚರ್ಚಿಸಿ ತೀರ್ಮಾನ ಮಾಡಿದ್ದೇವೆ. ಮಡಿಕೇರಿ ಚಲೋ ಮುಂದೂಡುತ್ತೇವೆ. ಕಾನೂನು ಉಲ್ಲಂಘನೆ ಮಾಡಲ್ಲ ಎಂದು ತಿಳಿಸಿದರು.
ಅತಿವೃಷ್ಟಿ ಹಾನಿ ಪರಿಶೀಲನೆಗೆ ಕೊಡಗಿಗೆ ಹೋಗಿದ್ದಾಗ ಕೆಲವರು ಕೋಳಿ ಮೊಟ್ಟೆ ಎಸೆದರು. ಆಗ ಪೊಲೀಸರು ಮಾತ್ರ ಸುಮ್ಮನೆ ನಿಂತಿದ್ದರು, ಏನೂ ಮಾಡಲಿಲ್ಲ. ನಮ್ಮ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ಮಾಡಿದ್ರೆ ಹೊರತು ಬಿಜೆಪಿ, ಭಜರಂಗದಳ ಕಾರ್ಯಕರ್ತರ ಮೇಲೆ ಏನೂ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.