Publish Date: Mon, 29 Jul 2024 (16:05 IST)
Updated Date: Mon, 29 Jul 2024 (16:17 IST)
ಬೆಂಗಳೂರು: ಮಂಗಳೂರಿನಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಶಿರಾಡಿ ಘಾಟಿಯಲ್ಲಿ ಮತ್ತೆ ಭೂಕುಸಿತ ಸಂಭವಿಸಿದ್ದು ಕಿಲೋಮೀಟರ್ ಗಟ್ಟಲೆ ವಾಹನಗಳು ಕ್ಯೂ ನಿಂತಿವೆ.
ಹಾಸನ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ಶಿರಾಡಿ ಘಾಟಿಯಲ್ಲಿ ನಿರಂತರ ಮಳೆಯಾಗುತ್ತಲೇ ಇದ್ದು, ಮಣ್ಣು ಸಡಿಲವಾಗಿದೆ. ಹೀಗಾಗಿ ಪದೇ ಪದೇ ಭೂ ಕುಸಿತವಾಗುತ್ತಲೇ ಇದೆ. ಕಳೆದ ನಾಲ್ಕೈದು ದಿನಗಳಿಂದ ಪದೇ ಪದೇ ರಸ್ತೆ ಬಂದ್ ಆಗುತ್ತಿದ್ದು ವಾಹನ ಸಂಚಾರಕ್ಕೆ ತೊಡಕಾಗುತ್ತಲೇ ಇದೆ.
ಸಕಲೇಶಪುರ ತಾಲೂಕಿನ ದೊಡ್ಡತಪ್ಪು ಬಳಿ ಭೂಕುಸಿತವಾಗಿದೆ. ಇದರಿಂದಾಗಿ ವಾಹನ ಸವಾರರು ಪರದಾಡುವಂತಾಗಿದೆ. ಒಂದೇ ಒಂದು ಸಮಾಧಾನಕರ ವಿಚಾರವೆಂದರೆ ಭೂಕುಸಿತದ ನಡುವೆಯೂ ತಕ್ಷಣವೇ ಮಣ್ಣು ತೆರವುಗೊಳಿಸಿ ಪ್ರಯಾಣಕ್ಕೆ ಅನುವು ಮಾಡಿಕೊಡಲಾಗುತ್ತಿದೆ.
ಹಾಗಿದ್ದರೂ ತೆರವುಗೊಳಿಸುವಷ್ಟು ಹೊತ್ತು ವಾಹನಗಳು ಸಂಚರಿಸಲಾಗದೇ ಘಾಟಿ ರಸ್ತೆಯಲ್ಲಿ ಕಿಲೋಮೀಟರ್ ಗಟ್ಟಲೇ ವಾಹನ ಸಾಲುಗಟ್ಟಿ ನಿಲ್ಲುವುದು ಕಳೆದ ಒಂದು ವಾರದಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಈಗಾಗಲೇ ರೈಲು ಮಾರ್ಗ ಬಂದ್ ಆಗಿದ್ದು ಮಧ್ಯಮ ವರ್ಗದವರು ರಸ್ತೆಯನ್ನೇ ಅವಲಂಬಿಸಿದ್ದಾರೆ.