Publish Date: Sat, 27 Jul 2024 (15:12 IST)
Updated Date: Sat, 27 Jul 2024 (15:17 IST)
ಬೆಂಗಳೂರು: ಎಡಕುಮೇರಿಯಲ್ಲಿ ಗುಡ್ಡ ಕುಸಿತವಾದ ಕಾರಣ ಬೆಂಗಳೂರು ಮತ್ತು ಮಂಗಳೂರು ನಡುವಿನ ರೈಲು ಪ್ರಯಾಣ ಸಂಪೂರ್ಣ ರದ್ದಾಗಿದೆ. ಬದಲಿ ಮಾರ್ಗದ ಸಂಚಾರವನ್ನೂ ರದ್ದು ಮಾಡಲಾಗಿದೆ.
ಕಳೆದ ವಾರ ಶಿರಾಡಿ ಘಾಟಿ ಮತ್ತು ಚಾರ್ಮಾಡಿ ಘಾಟಿಯಲ್ಲಿ ಬಸ್ ಸಂಚಾರ ಸ್ಥಗಿತವಾಗಿತ್ತು. ಇದರಿಂದ ಸಾಕಷ್ಟು ಪ್ರಯಾಣಿಕರಿಗೆ ಅನಾನುಕೂಲವಾಗಿತ್ತು. ಆದರೆ ಈಗ ರೈಲು ಮಾರ್ಗದಲ್ಲಿ ಗುಡ್ಡ ಕುಸಿತವಾಗಿ ಮಣ್ಣು ತುಂಬಿಕೊಂಡಿರುವುದರಿಂದ ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ.
ನಿನ್ನೆ ರಾತ್ರಿ ಘಟನೆ ಸಂಭವಿಸಿದ್ದು ಬಳಿಕ ರೈಲು ಪ್ರಯಾಣಿಕರನ್ನು ಬಸ್ ಮಾರ್ಗವಾಗಿ ಗಮ್ಯ ಸ್ಥಳಕ್ಕೆ ತಲುಪಿಸಲಾಗಿತ್ತು. ಬಳಿಕ ಇಂದು ಈ ಮಾರ್ಗವಾಗಿ ಸಂಚರಿಸಬೇಕಾದ ರೈಲುಗಳು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸುವುದೆಂದು ತೀರ್ಮಾನವಾಗಿತ್ತು. ಆದರೆ ಇದೀಗ ರೈಲ್ವೇ ರೈಲು ಸಂಚಾರವೇ ರದ್ದಾಗಿರುವುದಾಗಿ ಪ್ರಯಾಣಿಕರಿಗೆ ಸಂದೇಶ ರವಾನಿಸಿದೆ.
ರೈಲ್ವೇ ಸಂಚಾರ ಸ್ಥಗಿತವಾಗಿರುವುದರಿಂದ ಪ್ರಯಾಣಿಕರು ಬಸ್ ಗಳನ್ನೇ ಅವಲಂಬಿಸಬೇಕಿದೆ. ನಿನ್ನೆ ರಾತ್ರಿ ಚಾರ್ಮಾಡಿ ಘಾಟಿಯಲ್ಲೂ ಗುಡ್ಡ ಕುಸಿತವಾಗಿ ಸಂಚಾರಕ್ಕೆ ಸಮಸ್ಯೆಯಾಗಿತ್ತು. ಹಲವು ವಾಹನಗಳು ಸಾಲುಗಟ್ಟಿ ನಿಲ್ಲುವಂತಾಗಿತ್ತು. ಮಳೆಯ ಅಬ್ಬರದಿಂದಾಗಿ ಬೆಂಗಳೂರಿನಿಂದ ಕರಾವಳಿ ಭಾಗಗಳಿಗೆ ಸಂಚರಿಸುವುದೇ ದುಸ್ತರವಾಗಿದೆ.