ಬೆಂಗಳೂರು: ಕೆಎಸ್ ಆರ್ ಟಿಸಿ ಸಾರ್ವಜನಿಕರಿಗಾಗಿ ವಾರಂತ್ಯದಲ್ಲಿ ಹೊಸ ಟೂರ್ ಪ್ಯಾಕೇಜ್ ಒಂದನ್ನು ಘೋಷಿಸಿದೆ. ಈ ಪ್ಯಾಕೇಜ್ ನಲ್ಲಿ ಮೂರು ಸ್ಥಳಗಳಿಗೆ ಕಡಿಮೆ ವೆಚ್ಚದಲ್ಲಿ ಹೋಗಿ ಬರಬಹುದು. ಅದರ ವಿವರ ಇಲ್ಲಿದೆ ನೋಡಿ.
ಬಿಎಂಟಿಸಿ ಬೆಂಗಳೂರು ಆಸುಪಾಸಿಗರಿಗಾಗಿ 450 ರೂ. ದರದಲ್ಲಿ ಟೆಂಪಲ್ ಟೂರ್ ಪ್ಯಾಕೇಜ್ ಘೋಷಿಸಿದೆ. ಅದೇ ರೀತಿ ಕೆಎಸ್ ಆರ್ ಟಿಸಿಯಿಂದಲೂ ವಾರಂತ್ಯಕ್ಕೆ ಹೊಸ ಟೆಂಟಲ್ ಟೂರ್ ಪ್ಯಾಕೇಜ್ ಘೋಷಣೆಯಾಗಿದೆ. ಇದರ ವಿಶೇಷತೆಯೇನು ನೋಡಿ.
ಅಶ್ವಮೇಧ ಐಷಾರಾಮಿ ಬಸ್ ನಲ್ಲಿ 350 ಕಿ.ಮೀ. ವ್ಯಾಪ್ತಿಯಲ್ಲಿರುವ ಬೆಂಗಳೂರಿಗೆ ಸಮೀಪದಲ್ಲೇ ಇರುವ ಶ್ರೀರಂಗಪಟ್ಟಣ, ಮೇಲುಕೋಟೆ, ನಿಮಿಷಾಂಬ ದೇವಾಲಯ, ಕಲ್ಲಹಳ್ಳಿ ಭೂ ವರಾಹ ಸ್ವಾಮಿ ದೇವಾಲಯ, ತಂಗಿ ಕೊಳ, ಅಕ್ಕ ಕೊಳ, ರಾಯಗೋಪುರಂ ಸ್ಥಳಗಳನ್ನು ಒಂದು ದಿನದಲ್ಲಿ ಸಂದರ್ಶಿಸಬಹುದು. ಬೆಳಿಗ್ಗೆ 6.30 ಕ್ಕೆ ಬೆಂಗಳೂರಿನಿಂದ ಹೊರಟು ರಾತ್ರಿ ಬೆಂಗಳೂರಿಗೆ ವಾಪಸ್ ಆಗಬಹುದಾಗಿದೆ. ಇದಕ್ಕಾಗಿ ವಯಸ್ಕರಿಗೆ 670 ರೂ. ಮತ್ತು ಮಕ್ಕಳಿಗೆ 500 ರೂ. ದರ ನಿಗದಿಪಡಿಸಲಾಗಿದೆ.
ಆದರೆ ಗಮನಿಸಿ, ಈ ಪ್ಯಾಕೇಜ್ ನಲ್ಲಿ ಊಟ, ದರ್ಶನ ಶುಲ್ಕ ಸೇರಿರುವುದಿಲ್ಲ. ಮೇ 31 ರಿಂದ ವಾರಂತ್ಯದಲ್ಲಿ ಈ ಟೂರ್ ಪ್ಯಾಕೇಜ್ ಲಭ್ಯವಿರಲಿದೆ. ಇದಕ್ಕಾಗಿ ಕೆಎಸ್ ಆರ್ ಟಿಸಿ ವೆಬ್ ಸೈಟ್
http://www.ksrtc.in/ ರಲ್ಲಿ ಅಥವಾ ಕೆಎಸ್ ಆರ್ ಟಿಸಿ ಸಹಾಯವಾಣಿ 26252625/ 7760990100/7760990560/7760990287 ಸಂಖ್ಯೆಗೆ ಕರೆ ಮಾಡಿ ಬುಕಿಂಗ್ ಮಾಡಿಕೊಳ್ಳಬಹುದು.